ನೋಯ್ಡಾ : ದಲಿತರು ಹಾಗೂ ಮಹಿಳೆಯರನ್ನು ಉದ್ಯಮಪತಿಗಳನ್ನಾಗಿ ಮಾಡಲು ಮುಂದಾಗಿರುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ, ಎದ್ದು ನಿಲ್ಲು ಭಾರತ (ಸ್ಟಾಂಡ್ ಅಪ್ ಇಂಡಿಯಾ) ಎಂಬ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ನೀಡಿದೆ. ಈ ಯೋಜನೆಯಡಿ, ದೇಶಾದ್ಯಂತ ಇರುವ 1.25 ಲಕ್ಷ ಬ್ಯಾಂಕ್ ಶಾಖೆಗಳು ಕನಿಷ್ಠ ಒಬ್ಬ ದಲಿತ ಹಾಗೂ ಒಬ್ಬ ಮಹಿಳೆಗೆ ಉದ್ಯಮ ಆರಂಭಿಸಲು 1 ಕೋಟಿ ರೂ.ವರೆಗೂ ಕಡ್ಡಾಯವಾಗಿ ಸಾಲ ನೀಡಬೇಕಾಗುತ್ತದೆ.
ಮಾಜಿ ಉಪಪ್ರಧಾನಿ ಬಾಬು ಜಗಜೀವನರಾಂ ಅವರ ಜನ್ಮದಿನದಂದು ನೋಯ್ಡಾದಲ್ಲಿ ನಡೆದ ಕಾರ್ಯಕ್ರ ಮದಲ್ಲಿ ಪ್ರಧಾನಿ ಮೋದಿ ಈ ಯೋಜನೆಗೆ ಚಾಲನೆ ನೀಡಿದರು. ಎಲ್ಲರಿಗೂ ಉದ್ಯೋಗ ದೊರಕಿಸಿಕೊಡಲು ಸರಕಾರದಿಂದ ಸಾಧ್ಯವಿಲ್ಲ. ಹೀಗಾಗಿ ಉದ್ಯೋಗಾಕಾಂಕ್ಷಿಗಳನ್ನೇ ಉದ್ಯೋಗಸೃಷ್ಟಿ ಕರ್ತರನ್ನಾಗಿ ಮಾಡಲು ಸರಕಾರ ಯೋಜನೆ ತಂದಿದೆ. ದಲಿತರು ಹಾಗೂ ಬುಡಕಟ್ಟು ಸಮುದಾಯದ ಜನರ ಜೀವನವನ್ನೇ ಈ ಯೋಜನೆ ಬದಲಿಸುತ್ತದೆ ಎಂದು ಹೇಳಿದರು.
ಎದ್ದು ನಿಲ್ಲು ಭಾರತ ಯೋಜನೆ 2.5 ಲಕ್ಷ ಉದ್ಯಮಿಗಳ ಸೃಷ್ಟಿಗೆ ನೆರವಾಗಲಿದೆ. 10 ಲಕ್ಷ ರೂ.ನಿಂದ 1 ಕೋಟಿ ರೂ.ವರೆಗೆ ಸಾಲ ಸಿಗಲಿದೆ. ಪ್ರತಿಯೊಬ್ಬ ಭಾರತೀಯರನ್ನೂ ಸಬಲೀಕರಣಗೊಳಿಸಿ, ಅವರು ತಮ್ಮ ಕಾಲಿನ ಮೇಲೆ ನಿಲ್ಲುವಂತೆ ಮಾಡುವುದೇ ಯೋಜನೆ ಉದ್ದೇಶ ಎಂದು ತಿಳಿಸಿದರು.
ಎಸ್ಸಿ, ಎಸ್ಟಿ ಜನರು, ಮಹಿಳೆಯರನ್ನು ಉದ್ಯಮಪತಿಗಳನ್ನಾಗಿ ಮಾಡುವ ಉದ್ದೇಶವನ್ನು 'ಎದ್ದು ನಿಲ್ಲು ಭಾರತ' ಯೋಜನೆ ಹೊಂದಿದೆ. ಇದರಡಿ, ದೇಶಾದ್ಯಂತ ಇರುವ 1.25 ಲಕ್ಷ ಬ್ಯಾಂಕ್ ಶಾಖೆಗಳು ಕನಿಷ್ಠ ಒಬ್ಬ ದಲಿತ ಹಾಗೂ ಒಬ್ಬ ಮಹಿಳೆಗೆ ಕಡ್ಡಾಯವಾಗಿ 10 ಲಕ್ಷ ರೂ.ನಿಂದ 1 ಕೋಟಿ ರೂ.ವರೆಗೆ ಉದ್ಯಮ ಆರಂಭಿಸಲು ಖಾತ್ರಿ ರಹಿತ ಸಾಲ ಸೌಲಭ್ಯ ಒದಗಿಸಬೇಕಾಗುತ್ತದೆ. ಇದರಿಂದಾಗಿ ಕನಿಷ್ಠ 2.50 ಲಕ್ಷ ಮಂದಿಗೆ ಸಾಲ ಸಿಗುವುದು ಖಚಿತವಾಗಲಿದೆ.