ಬೆಂಗಳೂರು : ಸುಪ್ರೀಂ ಕೋರ್ಟ್ ಆದೇಶದನ್ವಯ ಪ್ರಸಕ್ತ ಸಾಲಿನ ವೈದ್ಯಕೀಯ, ದಂತ ವೈದ್ಯಕೀಯ ಕೋರ್ಸ್ ಗಳ ಪ್ರವೇಶಕ್ಕೆ ಭಾನುವಾರ ನೀಟ್ (ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ) ನಡೆಯಲಿದೆ.
ದೇಶವ್ಯಾಪಿ ಏಕರೂಪದ ಪ್ರವೇಶ ಪರೀಕ್ಷೆ ಕುರಿತು ಸುಪ್ರೀಂಕೋರ್ಟ್ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಡೆಯುವ ಸಿಇಟಿ ಪರೀಕ್ಷೆ ರದ್ದುಪಡಿಸುವ ಪ್ರಸ್ತಾಪವೇ ಇಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಮೇ 1ರಂದು ನೀಟ್ ಪರೀಕ್ಷೆ, ಮೇ 4, 5, 6ರಂದು ಸಿಇಟಿ ಹಾಗೂ ಜುಲೈ 24ರಂದು ಎರಡನೇ ಹಂತದ ನೀಟ್ ಪರೀಕ್ಷೆ ಬರೆಯುವುದು ಕಡ್ಡಾಯವಾಗಿದೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಉನ್ನತ ಶಿಕ್ಷಣ ಸಚಿವ ಟಿ.ಬಿ.ಜಯಚಂದ್ರ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ಪ್ರಕಾಶ್ ಪಾಟೀಲ್, ಮೇ 1ರಂದು ನೀಟ್ ಪರೀಕ್ಷೆ ಬರೆಯುವವರು ಜುಲೈ 24 ರಂದು ನಡೆಯಲಿರುವ ಎರಡನೇ ಹಂತದ ನೀಟ್ ಪರೀಕ್ಷೆ ಬರೆಯುವ ಅಗತ್ಯವಿಲ್ಲ. ಆದರೆ, ಸಿಇಟಿ ಪರೀಕ್ಷೆ ಬರೆಯದವರು ಅಂದು ಕಡ್ಡಾಯವಾಗಿ ಬರೆಯಬೇಕು ಎಂದು ಹೇಳಿದರು.
ಸೀಟು ಹಂಚಿಕೆ, ಮೀಸಲಾತಿ ವಿಷಯದಲ್ಲಿ ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಏನೂ ಹೇಳಿಲ್ಲ. ಹೀಗಾಗಿ, ಆ ಪ್ರಕ್ರಿಯೆ ಯಥಾಸ್ಥಿತಿಯಲ್ಲಿರುತ್ತದೆ. ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾಗುವ ಅಗತ್ಯವಿಲ್ಲ. ವೈದ್ಯ ಹಾಗೂ ದಂತ ವೈದ್ಯಕೀಯ ಕೋರ್ಸ್ಗಳಿಗೆ ಪ್ರವೇಶ ಪಡೆಯುವವರು ಈ ವರ್ಷದ ಮಟ್ಟಿಗೆ ಎರಡು ಪರೀಕ್ಷೆ ಬರೆಯಬೇಕಾಗಬಹುದು. ಆದರೆ, ಇದರಿಂದ ತೊಂದರೆಯೇನೂ ಆಗಲಾರದು ಎಂದು ತಿಳಿಸಿದರು.