ಬೆಂಗಳೂರು : ಮಹದಾಯಿ ನ್ಯಾಯಾಧಿಕರಣದ ಮಧ್ಯಂತರ ತೀರ್ಪು ಖಂಡಿಸಿ ಕನ್ನಡ ಪರ ಸಂಘಟನೆಗಳು ಇಂದು ಕರ್ನಾಟಕ ಬಂದ್ ಗೆ ಕರೆ ನೀಡಿದ್ದು, ಇದಕ್ಕೆ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ.
ಕರ್ನಾಟಕ ಬಂದ್ ಗೆ ಕನ್ನಡ ಚಿತ್ರೋದ್ಯಮ, ಕೆಎಸ್ಆರ್ಟಿಸಿ, ಬಿಎಂಟಿಸಿ, ಬೆಂಗಳೂರಿನ ಮಾಲ್, ಆಟೋ, ಟ್ಯಾಕ್ಸಿ ಚಾಲಕರ ಸಂಘ, ಖಾಸಗಿ ಶಾಲೆಗಳ ಒಕ್ಕೂಟ, ಹೊಟೇಲ್ ಸೇರಿದಂತೆ ಎಲ್ಲವೂ ಬಂದ್ ಗೆ ಬೆಂಬಲ ವ್ಯಕ್ತಪಡಿಸಿದ್ದು, ಬೆಳಗ್ಗೆ 6 ರಿಂದ ಸಂಜೆ 6 ಗಂಟೆ ತನಕ ಕರ್ನಾಟಕಕ್ಕೆ ಬಂದ್ ಬಿಸಿ ತಟ್ಟಲಿದೆ.
ಇನ್ನು ಖಾಸಗಿ ಶಾಲೆಗಳಿಗೆ ರಜೆ ಘೋಷಿಸುವಂತೆ ಖಾಸಗಿ ಶಾಲೆಗಳ ಒಕ್ಕೂಟ ಸೂಚನೆ ನೀಡಿದೆ. ಇನ್ನು ನ್ಯಾಯಾಧೀಕರಣ ತೀರ್ಪು ವಿರೋಧಿಸಿ ನಾಳೆ ಕನ್ನಡ ಚಿತ್ರರಂಗದವರು 11 ಗಂಟೆಗೆ ಟೌನ್ ಹಾಲ್ ನಿಂದ ಫ್ರೀಡಂಪಾರ್ಕ್ ವರೆಗೂ ಬೃಹತ್ ರ್ಯಾಲಿ ನಡೆಸಲಿದೆ.
ಶಿವರಾಜ್ ಕುಮಾರ್ ಸೇರಿದಂತೆ ಕನ್ನಡ ಚಿತ್ರರಂಗದ ಬಹುತೇಕ ಎಲ್ಲಾ ನಟ-ನಟಿಯರು ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬಂದ್ ಚಲನಚಿತ್ರ ವಾಣಿಜ್ಯ ಮಂಡಳಿ ನೀಡಿರುವ ಬೆಂಬಲ ಹಿನ್ನೆಲೆ ನಾಳೆ ಚಿತ್ರಮಂದಿರಗಳು ಸ್ಧಗಿತಗೊಳ್ಳಲಿವೆ. ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲೂ ಚಿತ್ರ ಪ್ರದರ್ಶನ ಇರುವುದಿಲ್ಲ.
ಬೆಂಗಳೂರಿನಲ್ಲಿ ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ ಸೇವೆ, ಆಟೋ, ಟ್ಯಾಕ್ಸಿ ಸೇವೆ, ಚಿತ್ರಮಂದಿರ, ಮಲ್ಟಿಪ್ಲೆಕ್ಸ್, ರೆಸ್ಟೋರೆಂಟ್, ಹೊಟೇಲ್, ಏರ್ ಪೋರ್ಟ್ ನಲ್ಲಿನ ಟ್ಯಾಕಿ ಸೇವೆ ಸ್ಧಗಿತ, ಪೆಟ್ರೋಲ್ ಬಂಕ್ ಕೂಡ ಬಂದ್ ನಿಂದಾಗಿ ಸ್ಥಗಿತಗೊಳ್ಳಲಿದೆ.
ಆಸ್ಪತ್ರೆ, ಮೆಡಿಕಲ್ ಶಾಪ್, ಆ್ಯಂಬುಲೆನ್ಸ್, ತರಕಾರಿ-ಹಣ್ಣು ಮಾರುಕಟ್ಟೆ, ಹಾಲು-ಪೇಪರ್, ಮೆಟ್ರೋ ರೈಲು ಸಂಚಾರ ಎಂದಿನಂತೆ ಇರಲಿದೆ.
ಇನ್ನು ಉತ್ತರ ಕರ್ನಾಟಕದಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಕೆಎಸ್ಆರ್ಟಿಸಿ, ಬಿಎಂಟಿಸಿ, ಎನ್ಇಕೆಎಸ್ಆರ್ಟಿ, ಎನ್ಡಬ್ಲ್ಯುಕೆಆರ್ಟಿಸಿ ನೌಕರರು ಬೆಂಬಲ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ, ಬಿಎಂಟಿಸಿ ಹಾಗೂ ಆಟೋ ಸೇವೆ ಸ್ಥಗಿತಗೊಳ್ಳಲಿದೆ ಈ ನಿಟ್ಟಿನಲ್ಲಿ ಜನಜೀವನ ಅಸ್ತವ್ಯಸ್ತವಾಗುವ ಸಾಧ್ಯತೆ ಇದೆ.