ನವದೆಹಲಿ : ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದ 22 ನೇ ಆವೃತ್ತಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ರಿಯೋ ಒಲಿಂಪಿಕ್ಸ್ನಲ್ಲಿ ದೇಶವನ್ನು ಪ್ರತಿನಿಧಿಸುತ್ತಿರುವ ಕ್ರೀಡಾಪಟುಗಳಿಗೆ ಶುಭ ಕೋರಿದರು. ರನ್ ಫಾರ್ ರಿಯೋ ಭಾರತದ ಅಥ್ಲಿಟ್ಗಳನ್ನು ಹುರಿದುಂಬಿಸುವ ಕಾರ್ಯಕ್ರಮ ಎಂದರು.
ಸ್ವಾತಂತ್ರ್ಯಾನಂತರ ಜನಿಸಿದ ಮೊದಲ ಪ್ರಧಾನಿ ನಾನು ಎಂದ ಪ್ರಧಾನಿ ಮೋದಿ, ಆಗಸ್ಟ್ 15 ಸ್ವಾತಂತ್ರ್ಯ ದಿನದಂದು ದೇಶದ ಜನತೆಯೊಂದಿಗೆ ಕೆಂಪುಕೋಟೆಯಿಂದ ಸಂಭಾಷಣೆ ನಡೆಸುವೆ.ಈ ಭಾರಿ 70ನೇಯ ಸ್ವಾತಂತ್ರ್ಯ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಈ ಸಲ ಪ್ರಧಾನಿ ಭಾಷಣವನ್ನು ಓದುವುದಿಲ್ಲ, ಬದಲಾಗಿ ಸಂದೇಶ ಸಂದೇಶ ನೀಡಲು ಬಯಸುತ್ತಾರೆ. ಅದಕ್ಕಾಗಿ ಸ್ವಾತಂತ್ರ್ಯ ದಿನದ ಭಾಷಣಕ್ಕೆ ಸಲಹೆ-ಸಂದೇಶಗಳನ್ನು ಪ್ರಧಾನಿ ಆಪ್ ಗೆ ಕಳುಹಿಸಿ ಎಂದು ತಿಳಿಸಿದರು.
ಮಾಜಿ ರಾಷ್ಟ್ರಪತಿ ದಿವಂಗತ ಅಬ್ದುಲ್ ಕಲಾಂ ಅವರು ಹೇಳಿದ ವಿಜ್ಞಾನ ಮತ್ತು ತಂತ್ರಜ್ಞಾನ ಬಳಕೆ ಭವಿಷ್ಯದಲ್ಲಿ ಮುಖ್ಯಪಾತ್ರ ವಹಿಸಲಿದೆ ಎಂದ ಅವರು, ತಂತ್ರಜ್ಞಾನ ದಿನದಿಂದ ದಿನಕ್ಕೆ ಬದಲಾಗುತ್ತಿದೆ. ಅದನ್ನು ತಿಳಿಯಲು ಸಂಶೋಧನೆ ಮತ್ತು ಪ್ರಯೋಗಗಳ ಅಗತ್ಯವಿದೆ ಎಂದು ಹೇಳಿದರು.
ಅಟಲ್ ಇನ್ನೋವೇಷನ್ ಮಿಷನ್, ಅಟಲ್ ಲ್ಯಾಬೋರೆಟರಿ ಹಾಗೂ ಅಟಲ್ ಸವಾಲುಗಳು ವಿಷಯಗಳನ್ನು ಪ್ರತಿಯೊಬ್ಬರು ಅರ್ಥೈಸಿಕೊಳ್ಳಬೇಕು. ಎಐಎಮ್ (ಅಟಲ್ ಇನ್ನೋವೇಷನ್ ಮಿಷನ್) ಅಟಲ್ಜಿಯವರ ಕನಸಾಗಿತ್ತು. ಅದನ್ನು ನನಸು ಮಾಡುವತ್ತ ಹೆಜ್ಜೆ ಹಾಕೋಣ. ಉದ್ಯಮಶೀಲತೆ, ಪ್ರಯೋಗ ಹಾಗೂ ನೈಪುಣ್ಯತೆಗಳನ್ನು ಪ್ರೋತ್ಸಾಹಿಸಲು ಪ್ರಧಾನಿ ಕರೆ ನೀಡಿದರು
ಕೆಲ ತಿಂಗಳ ಹಿಂದೆ ಬರದ ಛಾಯೆ ಎದುರಿಸುತ್ತಿದ್ದ ನಮಗೆ ಇಂದು ನೆರೆ ಹಾವಳಿ ಎದುರಾಗಿದೆ. ನೆರೆಹಾವಳಿಯಿಂದ ಉಂಟಾಗಬಹುದಾದ ರೋಗಗಳಿಂದ ರಕ್ಷಣೆಗೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು ಎಂದ ಮೋದಿ, ವೈದ್ಯರ ಭೇಟಿ ಮಾಡಿ ಸಲಹೆ ಪಡೆಯದೇ ಯಾವುದೇ ಔಷಧಗಳ ಸೇವನೆ ಮಾಡಬೆಡಿ, ಇದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಸಲಹೆ ನೀಡಿದರು.
ಇದೇ ವೇಳೆ ದಕ್ಷಿಣ ಆಫ್ರಿಕಾ ಪ್ರವಾಸವನ್ನು ನೆನಪಿಸಿದ ಪ್ರಧಾನಿ, ಕೆಲ ರಾಜತಾಂತ್ರಿಕ ವಿಷಯಗಳಿಗಾಗಿ ಇತ್ತೀಚೆಗೆ ನನಗೆ ದಕ್ಷಿಣ ಆಫ್ರಿಕಕ್ಕೆ ಭೇಟಿ ನೀಡುವ ಅವಕಾಶ ದೊರೆತಿತ್ತು. ಅದು ತೀರ್ಥಯಾತ್ರೆಯಂತಿತ್ತು. ಅಲ್ಲಿ ಜೀವನಕ್ಕಾಗಿ, ಸಮಾನತೆಗಾಗಿ ಹೋರಾಡುವ ಜನರನ್ನು ಕಂಡಿದ್ದೇನೆ ಎಂದರು.