ಬೆಂಗಳೂರು : ಗ್ರಾಮಗಳ ಅಭಿವೃದ್ಧಿಯಿಂದ ದೇಶದ ಅಭಿವೃದ್ಧಿ ಎಂಬ ಹಿನ್ನೆಲೆಯಲ್ಲಿ, ಹಳ್ಳಿಯಲ್ಲಿ ಬೆಳೆದ ವಿಷಮುಕ್ತವಾದ ಆಹಾರವಸ್ತುಗಳನ್ನು ಹಾಗೂ ರಾಸಾಯನಿಕ ರಹಿತ ದಿನಬಳಕೆ ವಸ್ತುಗಳನ್ನು ನೇರವಾಗಿ ನಗರಗಳಿಗೆ ಪೂರೈಸುವ ಕಾರ್ಯವನ್ನು ಕಳೆದ ಕೆಲವರ್ಷಗಳಿಂದ 'ಗ್ರಾಮರಾಜ್ಯ' ಯೋಜನೆಯು ನಡೆಸಿಕೊಂಡು ಬರುತ್ತಿದೆ.
ಇದೀಗ ಮತ್ತಷ್ಟು ಮೌಲ್ಯವರ್ಧನೆಯೊಂದಿಗೆ ಹೊಸರೂಪವನ್ನು ಪಡೆದು, ಗ್ರಾಹಕ ಸ್ನೇಹಿಯಾಗುತ್ತಿದ್ದು, ಇದಕ್ಕೆ ಪೂರಕವಾಗಿ 'ಗ್ರಾಮರಾಜ್ಯ'ದ ನೂತನ ಕಾರ್ಯಾಲಯ ಹಾಗೂ ವಿತರಣಾ ಕೇಂದ್ರವನ್ನು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವಭಾರತೀ ಸ್ವಾಮೀಜಿಯವರು ದಿನಾಂಕ 22.08.2016ರಂದು ಲೋಕಾರ್ಪಿತಗೊಳಿಸಿದರು.
ಸಾನ್ನಿಧ್ಯವಹಿಸಿದ್ದ ಶ್ರೀಗಳು ಶುಭಹಾರೈಸಿ ಮಾತನಾಡಿ, ಗ್ರಾಮರಾಜ್ಯದಿಂದ ರಾಮರಾಜ್ಯ ನಿರ್ಮಾಣವಾಗಲಿ, ವಿಷಮುಕ್ತವಾದ, ಸಾವಯವ ದಿನಬಳಕೆ ವಸ್ತುಗಳ ಸದುಉಪಯೋಗವನ್ನು ಸಾರ್ವಜನಿಕರು ಪಡೆದುಕೊಂಡು ಆರೋಗ್ಯಯುತ ಜೀವನವನ್ನು ನಡೆಸುವಂತಾಗಲಿ ಎಂದು ಹಾರೈಸಿದರು.
ರೈತರ ಬೆಳೆಗಳಿಗೆ ಉತ್ತಮವಾದ ಮಾರುಕಟ್ಟೆ ಒದಗಿಸುವುದು, ಗೃಹೋದ್ಯಮವನ್ನು ಪ್ರೋತ್ಸಾಹಿಸುವುದು ಹಾಗೂ ಅಡುಗೇ ಮನೆಯನ್ನು ವಿಷಮುಕ್ತವಾಗಿಸುವುದು ಶ್ರೀಗಳ ಪರಿಕಲ್ಪನೆಯ ಗ್ರಾಮರಾಜ್ಯದ ಉದ್ದೇಶವಾಗಿದ್ದು, ಈ ದಿಶೆಯಲ್ಲಿ 'ಗ್ರಾಮರಾಜ್ಯ'ವು ಬೃಹತ್ ಮಟ್ಟದ ಕಾರ್ಯಾರಂಭವನ್ನು ಮಾಡಲಿದ್ದು , ಕೈಗೆಟುಕುವ ದರದಲ್ಲಿ ಉತ್ತಮ ದರ್ಜೆಯ ದಿನಬಳಕೆ ವಸ್ತುಗಳು ದೊರೆಯಲಿವೆ. ಗ್ರಾಹಕ ಸ್ನೇಹಿಯಾಗುವ ಆನ್ ಲೈನ್ ಆರ್ಡರ್ ವ್ಯವಸ್ಥೆಯೂ ಶೀಘ್ರದಲ್ಲಿ ಬರಲಿದ್ದು, ಮಾಹಿತಿಗಾಗಿ 9449595243 ಸಂಪರ್ಕಿಸಬಹುದಾಗಿದೆ.
ಕಾರ್ಯಕ್ರಮದಲ್ಲಿ, ಗ್ರಾಮರಾಜ್ಯದ ಟ್ರಸ್ಟಿಗಳಾದ ಆರ್ ಎಸ್ ಹೆಗಡೆ, ಎಸ್ ಎನ್ ಭಟ್, ಜೆಡ್ಡು ರಾಮಚಂದ್ರ ಭಟ್ , ಕಾರ್ಯದರ್ಶಿಗಳಾದ ಕೃಷ್ಣಪ್ರಸಾದ್ ಅಮ್ಮಂಕಲ್ಲು, ಸಹಕಾರ್ಯದರ್ಶಿಗಳಾದ ಶಶಾಂಕ್ ತೆಂಕಿಲ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.