ನವದೆಹಲಿ : ಭಯೋತ್ಪಾದನೆಗೆ ಬೆಂಬಲ ನೀಡುತ್ತಿರುವ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಲು ನಿರ್ಧರಿಸಿರುವ ಭಾರತ ಸಿಂಧೂ ನದಿ ಒಪ್ಪಂದದಿಂದ ಹಿಂದೆಸರಿಯಲು ನಿರ್ಧರಿಸಿದ್ದು, ಸಿಂಧು, ಛೇನಾಬ್ ಮತ್ತು ಝೇಲಂ ನದಿ ನೀರಿನ ಗರಿಷ್ಠ ಬಳಕೆಗೆ ತೀರ್ಮಾನ ಕೈಗೊಂಡಿದೆ.
ಜಮ್ಮು-ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 18 ಯೋಧರನ್ನು ಹತ್ಯೆಗೈದ ಪಾಕಿಸ್ತಾನಕ್ಕೆ ತೀಕ್ಷ್ಣ ಪ್ರತ್ಯುತ್ತರ ನೀಡಲು ಮುಂದಾಗಿರುವ ನಿಟ್ಟಿನಲ್ಲಿ ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ 1960ರಲ್ಲಿ ನಡೆದ ಸಿಂಧೂ ನದಿ ಒಪ್ಪಂದದ ಸಾಧಕ-ಬಾಧಕಗಳ ಕುರಿತು ಮರುಪರಿಶೀಲನಾ ಸಭೆ ನಡೆಯಿತು. ಸಭೆಯಲ್ಲಿ ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಬರಲಾಗಿದ್ದು, ಪಾಕಿಸ್ತಾನದ ವಿರುದ್ಧ ಜಲಯುದ್ಧ ಸಾರಲು ನಿರ್ಧರಿಸಲಾಗಿದೆ.
ಅಲ್ಲದೇ ಜಮ್ಮು-ಕಾಶ್ಮೀರದಿಂದ ಹರಿಯುವ ಛೇನಾಬ್ ನದಿಗೆ ಅಣೆಕಟ್ಟು ನಿರ್ಮಿಸಲು ನಿರ್ಧರಿಸಲಾಗಿದ್ದು, ನದಿಪಾತ್ರದಲ್ಲಿ ಟುಲ್ ಬುಲ್ ಯೋಜನೆ ಜಾರಿಗೊಳಿಸಲು ತೀರ್ಮಾನಿಸಲಾಗಿದೆ.
1960ರಲ್ಲಿ ಸಿಂಧೂ ನದಿ ನೀರು ಹಂಚಿಕೆ ಕುರಿತಂತೆ ಭಾರತ ಹಾಗೂ ಪಾಕಿಸ್ತಾನ ದೇಶಗಳ ಮಧ್ಯೆ ಒಪ್ಪಂದವಾಗಿತ್ತು. ಒಪ್ಪಂದಕ್ಕೆ ಅಂದಿನ ಪ್ರಧಾನಮಂತ್ರಿ ಜವಾಹರ್ ಲಾಲ್ ನೆಹರು ಹಾಗೂ ಪಾಕಿಸ್ತಾನ ಪ್ರಧಾನಮಂತ್ರಿ ಅಯುಬ್ ಖಾನ್ ಅವರು ಸಹಿ ಮಾಡಿದ್ದರು. ಸಿಂಧೂ ಜಲ ಒಪ್ಪಂದ ವಿಶ್ವದಲ್ಲೆ ಅತ್ಯಂತ ಉದಾರವಾದ ನದಿ ನೀರು ಹಂಚಿಕೆ ಒಪ್ಪಂದ ಎಂದು ಪರಿಗಣಿಸಲಾಗಿದ್ದು, ಉಭಯ ದೇಶಗಳನಡುವೆ ಹಲವು ಘರ್ಷಣೆಗಳು ನಡೆದರೂ ಈ ಒಪ್ಪಂದಕ್ಕೆ ಧಕ್ಕೆಯುಂಟಾಗಿರಲಿಲ್ಲ.
ಒಪ್ಪಂದದ ಪ್ರಕಾರ ಬಿಯಾಸ್, ರಾವಿ, ಸಟ್ಲೆಜ್ ನದಿಗಳ ಮೇಲಿನ ನಿಯಂತ್ರಣವನ್ನು ಭಾರತಕ್ಕೆ ನೀಡಿದ್ದರೆ, ಚೇನಾಬ್, ಸಿಂಧೂ, ಝೇಲಂ ನದಿಗಳನ್ನು ಪಾಕಿಸ್ತಾನದ ಹಿಡಿತಕ್ಕೆ ನೀಡಲಾಗಿತ್ತು. ನದಿಪಾತ್ರದಲ್ಲಿನ ಪಾಕ್ ಗೆ ಭಾರತಕ್ಕೆ ದೊರೆಯುವ ನೀರಿನ ನಾಲ್ಕುಪಟ್ಟು ಹೆಚ್ಚು ನೀರನ್ನು ನೀಡಲಾಗುತ್ತಿತ್ತು.