ಟೋಕಿಯೋ : ಪ್ರಧಾನಿ ನರೇಂದ್ರ ಮೋದಿ ಜಪಾನ್ ನಲ್ಲಿ ಶಾಲಾ ಮಕ್ಕಳಿಗೆ ಪುರಾಣ ಪ್ರಸಿದ್ಧ ಶ್ರೀಕೃಷ್ಣನ ಕಥೆಯನ್ನು ನಿರೂಪಣೆ ಮಾಡಿದರು.
ಜಪಾನ್ ನಲ್ಲಿ ಶಿಕ್ಷಣ ಕ್ಷೇತ್ರ ಕಾರ್ಯನಿರ್ವಹಿಸುವ ವಿಧಾನ ತಿಳಿದುಕೊಳ್ಳಲು ಉತ್ಸುಕರಾಗಿದ್ದ ನರೇಂದ್ರ ಮೋದಿ, ಜಪಾನ್ ಶಾಲೆಯೊಂದಕ್ಕೆ ಸೆ.1ರಂದು ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಿದರು. ಇದೇ ಸಂದರ್ಭದಲ್ಲಿ ಸಂಗೀತ ತರಬೇತಿ ನೀಡುತ್ತಿದ್ದ ತರಗತಿಗೆ ಮೋದಿ ಭೇಟಿ ನೀಡುತ್ತಿದ್ದಂತೆಯೇ ವಿದ್ಯಾರ್ಥಿಗಳು ಕೊಳಲು ನುಡಿಸುವ ಮೂಲಕ ಪ್ರಧಾನಿಯನ್ನು ಬರಮಾಡಿಕೊಂಡರು.
ವಿದ್ಯಾರ್ಥಿಗಳು ಕೊಳಲು ನುಡಿಸಿದ್ದನ್ನು ಗಮನಿಸಿದ ಮೋದಿ, ಕೊಳಲು ನಾದಕ್ಕೆ ಪ್ರಾಣಿಗಳನ್ನು ಆಕರ್ಷಿಸುವ ಶಕ್ತಿ ಇದೆ ಎಂದು ವಿದ್ಯಾರ್ಥಿಗಳೊಂದಿಗೆ ಮಾತಿಗಿಳಿದ ಮೋದಿ, ಭಾರತದ ಪುರಾಣದಲ್ಲಿ ಕೃಷ್ಣನೆಂಬ ದೇವರಿದ್ದು ಆತ ಗೋವುಗಳನ್ನು ಆಕರ್ಷಿಸಲು ಕೊಳಲು ನುಡಿಸುತ್ತಿದ್ದ ಎಂದು ಭಾರತದ ಪೌರಾಣಿಕ ಇತಿಹಾಸವನ್ನು ಜಪಾನ್ ವಿದ್ಯಾರ್ಥಿಗಳಿಗೆ ತಿಳಿಸಿದರು.
ಶಾಲೆಗೆ ಭೇಟಿ ನೀಡಿದ ಬಳಿಕ ಜಪಾನ್ ಚಹಾ ಸೇವಿಸಿದ ಪ್ರಧಾನಿ ನರೇಂದ್ರ ಮೋದಿ ಜಪಾನ್ ಪ್ರಧಾನಿ ಶಿಂಜೋ ಅಬೆ ಅವರೊಂದಿಗೆ ಚರ್ಚೆ ನಡೆಸಿದರು. ಪ್ರಧಾನಿಯೊಬ್ಬರು ಜಪಾನ್ ಶಾಲಾ ವಿದ್ಯಾರ್ಥಿಗಳಿಗೆ ಭಾರತದ ಪೌರಾಣಿಕ ಇತಿಹಾಸ ತಿಳಿಸಿದ್ದು ವಿಶೇಷವಾಗಿತ್ತು.