ತುಮಕೂರು : ದೇಶದ ಸ್ವಚ್ಛತೆಗಾಗಿ ನಾವು ಭಿಕ್ಷೆ ಬೇಡೋಣ. ದಿನದ 2 ಗಂಟೆ ನೀವು ನನಗಾಗಿ ಮೀಸಲಿಡಿ ಎಂದು ಪ್ರಧಾನಿ ನರೇಂದ್ರ ಮೋದಿ ಮಕ್ಕಳಿಗೆ ಕರೆ ನೀಡಿದ್ದಾರೆ.
ತುಮಕೂರಿನ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ, ಶಿವಕುಮಾರ ಸ್ವಾಮೀಜಿಯವರಿಗೆ ನಮಸ್ಕರಿಸಿ ಅವರ ಆಶೀರ್ವಾದ ಪಡೆದರು. ಇದೇ ವೇಳೆ ಜಮ್ಮು-ಕಾಶ್ಮೀರದಲ್ಲಿ ಉಂಟಾಗಿರುವ ಪ್ರವಾಹ ಪರಿಹಾರ ನಿಧಿಗಾಗಿ ಶಿವಕುಮಾರ ಸ್ವಾಮೀಜಿ 25 ಲಕ್ಷ ರೂ. ಚೆಕ್ ನ್ನು ಪ್ರಧಾನಿ ಮೋದಿಯವರಿಗೆ ನೀಡಿದರು.
ಈ ವೇಳೆ ಸಿದ್ಧಗಂಗಾ ಮಠದ ಮಕ್ಕಳನ್ನುದ್ದೇಶಿಸಿ ಮಾತನಾಡಿದ ಮೋದಿ, ದಿನದ 2 ಗಂಟೆ ನೀವು ನನಗಾಗಿ ಮೀಸಲಿಡಿ. ನನ್ನ ಸಂಕಲ್ಪಕ್ಕೆ ನಿಮ್ಮಂಥ ಮಕ್ಕಳು ಕೈಜೋಡಿಸಬೇಕಿದೆ. ನಾವೂ ಶಿವಕುಮಾರ ಶ್ರೀಗಳಂತೆ ಸಮಾಜಸೇವೆ ಮಾಡೋಣ. ದೇಶದ ಸ್ವಚ್ಛತೆಗಾಗಿ ನಾವು ಭಿಕ್ಷೆ ಬೇಡೋಣ. ಆಗ ದೇಶದಲ್ಲಿ ಎಲ್ಲೂ ಕೊಳಕು ಕಂಡು ಬರುವುದಿಲ್ಲ ಎಂದರು.
ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಸಿದ್ಧಗಂಗಾ ಮಠಕ್ಕೆ ಬಂದಿದ್ದೆ. ಆಗ ನಾನು ಪ್ರಧಾನಿಯಾಗಬೇಕು ಎಂದು ಶ್ರೀಗಳು ಹಾರೈಸಿದ್ದರು. ಈ ಆಶೀರ್ವಾದ ನನ್ನ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿದರು.
ಸಾಧು, ಸಂತರು ದೇಶಕ್ಕೆ ಏನೂ ಮಾಡುವುದಿಲ್ಲ ಎಂಬ ಮಾತಿದೆ. ಆದರೆ ದೇಶ ನಿರ್ಮಾಣವಾಗಿರುವುದೇ ಸಾಧು, ಸಂತರಿಂದ ಶತಾಯುಷಿ ಶಿವಕುಮಾರ ಸ್ವಾಮೀಜಿ ಸಮಾಜಕ್ಕೆ ಅಪಾರ ಕೊಡುಗೆಗಳನ್ನು ನೀಡಿದ್ದಾರೆ ಎಂದರು.
ಮಹತ್ತರ ಕಾರ್ಯ ನಿಮಿತ್ತ ನಾನು ಕರ್ನಾಟಕಕ್ಕೆ ಬಂದಿದ್ದೇನೆ. ಇಂದು ನನ್ನ ಪಾಲಿಗೆ ಮಹತ್ವದ ದಿನ. ಮಾಮ್ ನೌಕೆ ಇಂದು ಮಂಗಳನ ಕಕ್ಷೆಗೆ ಯಶಸ್ವಿಯಾಗಿ ತಲುಪಿದೆ. ಮಂಗಳಯಾನದ ಮೊದಲ ಯತ್ನದಲ್ಲೇ ನಾವು ಗುರಿ ತಲುಪಿದ್ದೇವೆ. ಇಸ್ರೋ ವಿಜ್ನಾನಿಗಳ ಈ ಸಾಧನೆಗೆ ನಾವೆಲ್ಲ ಎದ್ದು ನಿಂತು ಅಭಿನಂದಿಸೋಣ ಎಂದು ಮೋದಿ ಕರೆ ಕೊಟ್ಟರು.
ಪ್ರಧಾನಿ ಮೋದಿ ಕರೆಗೆ ಓಗುಟ್ಟ ಮಕ್ಕಳು, ಎದ್ದು ನಿಂತು, ಚಪ್ಪಾಳೆ ಮೂಲಕ ವಿಜ್ನಾನಿಗಳಿಗೆ ಅಭಿನಂದಿಸಿದರು.