ನವದೆಹಲಿ : ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಚಹಾಕೂಟ ಏರ್ಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ದೇಶ ಬದಲಿಸುವಲ್ಲಿ ಮಾಧ್ಯಮಗಳ ಪಾತ್ರ ಮಹತ್ವದ್ದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೇಂದ್ರದಲ್ಲಿ ಎನ್.ಡಿ.ಎ ಸರ್ಕಾರ ಅಧಿಕಾರಕ್ಕೆ ಬಂದು 5 ತಿಂಗಳ ಹಿನ್ನಲೆಯಲ್ಲಿ ಬಿಜೆಪಿ ಕೇಂದ್ರ ಕಛೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾಧ್ಯಮಗಳ ಪ್ರತಿನಿಧಿಗಳಿಗೆ ಚಹಾಕೂಟ ಏರ್ಪಡಿಸಿದ್ದಾರೆ.
ನರೇಂದ್ರ ಮೋದಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲಬಾರಿಗೆ ಮಾಧ್ಯಮ ಸಂವಾದ ನಡೆಸಿದ್ದಾರೆ.
ಈ ವೇಳೆ ಮಾತನಾಡಿದ ಮೋದಿ, ಪತ್ರಕರ್ತರ ಜತೆಗೆ ನನಗೆ ಸ್ನೇಹಮಯ ಸಂಬಂಧವಿದೆ. ಗುಜರಾತ್ ನಲ್ಲಿ ನಿಮ್ಮೊಂದಿಗಿನ ಸಂಬಂಧದ ಲಾಭ ದೊರೆತಿದೆ. ದೀಪಾವಳಿ ಸಂದರ್ಭದಲಿ ನಿಮ್ಮ ಭೇಟಿ ಸಂತಸ ತಂದಿದೆ. ಮಾಧ್ಯಮಗಳ ಜತೆ ಸಂಬಂಧ ಮತ್ತಷ್ಟು ವೃದ್ಧಿಯಾಗಲು ಬಯಸುತ್ತೇನೆ. ಪ್ರಧಾನಿ ಹಾಗೂ ಮಾಧ್ಯಮ ಪ್ರತಿನಿಧಿಗಳ ಜತೆ ಸಂವಾದ ಹೆಚ್ಚಾಗಿ ನಡೆಯಬೇಕು. ಆದರೆ ಇತ್ತೀಚೆಗೆ ಹಾಗಾಗುತ್ತಿಲ್ಲ ಎಂದರು.
ಮಾಧ್ಯಮಗಳ ಮೂಲಕ ಸರ್ಕಾರದ ಶೇ.80 ಯೋಜನೆಗಳು ಕಾರ್ಯರೂಪಕ್ಕೆ ಬಂದಿವೆ. ದೇಶ ಬದಲಿಸುವಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ತಿಳಿಸಿದರು.
ಸ್ವಚ್ಛ ಭಾರತ ಅಭಿಯಾನದಲ್ಲಿ ಮಾಧ್ಯಮಗಳ ಪಾತ್ರ ಮಹತ್ವದ್ದು ಎಂದ ಮೋದಿ, ನಾನು ಕಳೆದೊಂದು ತಿಂಗಳಿನಿಂದ ಗಮನಿಸುತ್ತಿದ್ದೇನೆ, ಮಾಧ್ಯಮಗಳಲ್ಲಿ ಸ್ವಚ್ಛ ಭಾರತ ಅಭಿಯಾನದ ಬಗ್ಗೆ ಚರ್ಚೆಯಾಗುತ್ತಿದೆ. ಸ್ವ ಇಚ್ಛೆಯಿಂದ ಈ ಬಗ್ಗೆ ಚರ್ಚೆಯಾಗುತ್ತಿದೆ. ಮಾಧ್ಯಮಗಳಿಂದ ಯೋಜನೆಗೆ ಅಭೂತಪೂರ್ವ ಸಹಕಾರ ದೊರೆತಿದೆ. ಈ ಆಂದೋಲನಕ್ಕೆ ಕೈಜೋಡಿಸಿದ್ದಕ್ಕಾಗಿ ಧನ್ಯವಾದಗಳು ಎಂದರು.