Mangalore : ಆಸ್ತಿ ಮೌಲ್ಯ ಹೆಚ್ಚಳ ಕುರಿತು ಯಾವುದೇ ಭ್ರಷ್ಟಾಚಾರ ನಡೆಸಿಲ್ಲ ಎಂದು ಸ್ಪಷ್ಟಪಡಿಸಿರುವ ಕೇಂದ್ರ ರೈಲ್ವೆ ಸಚಿವ ಸದಾನಂದಗೌಡ, ಈ ಸಂಬಂಧ ದಾಖಲೆಗಳನ್ನು ಬಿಡುಗಡೆಗೊಳಿಸಿದ್ದಾರೆ.
ಮಂಗಳೂರಿನ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ದಾಖಲೆಗಳನ್ನು ಬಿಡುಗಡೆಮಾಡಿದರು. ಲೋಕಸಭಾ ಚುನಾವಣೆ ವೇಳೆ ಸಲ್ಲಿಸಲಾಗಿದ್ದ ಆಸ್ತಿ ವಿವರ ಹಾಗೂ ಸಚಿವರಾದ ಬಳಿಕ ಘೋಷಿಸಿರುವ ಆಸ್ತಿ ಪ್ರಮಾಣ ಪತ್ರದಲ್ಲಿ ಇರುವ ವ್ಯತ್ಯಾಸದಿಂದ ಅಕ್ರಮ ನಡೆಸಿರುವುದಾಗಿ ಆರೊಪ ಮಾಡುವುದು ಸರಿಯಲ್ಲ ಎಂದರು.
ರಾಜಕೀಯ ಜೀವನದಲ್ಲಿ ಯಾವುದೇ ಭ್ರಷ್ಟಾಚಾರವನ್ನು ನಡೆಸಿಲ್ಲ, ನನ್ನ ಎಲ್ಲಾ ವ್ಯವಹಾರಗಳು ಪಾರದರ್ಶಕವಾಗಿವೆ ಎಂದ ಸದಾನಂದಗೌಡ, ಫೆಡರ್ಲ್ ಬ್ಯಾಂಕ್ ನಿಂದ 8 ಕೋಟಿ ಸಾಲಪಡೆದುಕೊಂಡಿದ್ದೇನೆ ಹಾಗೂ ಬಾಡಿಗೆದಾರರಿಂದ 2 ಕೋಟಿ ಮುಂಗಡ ಪಡೆದುಕೊಂಡಿರುವುದಾಗಿ ತಿಳಿಸಿದರು.
ಬೆಂಗಳೂರಿನ ನ್ಯೂ ಬಿಇಎಲ್ ರಸ್ತೆಯಲ್ಲಿರುವ ಬಹುಮಹಡಿ ಕಟ್ಟಡಕ್ಕೆ 2 ಕೋಟಿ ರೂ ಮುಂಗಡ ಹಣ ಪಡೆದಿದ್ದೇನೆ. ಬ್ಯಾಂಕ್ ನಿಂದ ಪಡೆದಿರುವ ಸಾಲದ ದಾಖಲಾತಿಗಳನ್ನೂ ನೀಡಿದ್ದೇನೆ. ಸಚಿವನಾದ ಬಳಿಕ ಹೊಸ ಆಸ್ತಿವಿವರ ಸಲ್ಲಿಸಿದ್ದೇನೆ ಹೊರತು ಅದರಲ್ಲಿ ಯಾವುದೇ ಅವ್ಯವಹಾರ ನಡೆಸಿಲ್ಲ ಎಂದು ತಿಳಿಸಿದರು.
ಲೋಕಸಭಾ ಚುನಾವಣೆಯ ವೇಳೆ 9.88ಕೋಟಿ ರೂ ಆಸ್ತಿ ಹೊಂದಿದ್ದ ಸದಾನಂದಗೌಡರು, ಈಗ ತಮ್ಮ ಬಳಿ 20.35 ಕೋಟಿ ರೂ ಸಂಪತ್ತಿರುವುದಾಗಿ ಪ್ರಧಾನಿ ಕಾರ್ಯಾಲಯಕ್ಕೆ ತಿಳಿಸಿದ್ದರು. ಐದೇ ತಿಂಗಳಲ್ಲಿ ಸದಾನಂದಗೌಡರ ಆಸ್ತಿ 10.46 ಕೋಟಿ ರೂ. ನಷ್ಟು ಹೆಚ್ಚಳವಾಗಿದೆ ಎಂದು ನ್ಯಾಷನಲ್ ಎಲೆಕ್ಷನ್ ವಾಚ್ ಹಾಗೂ ಆಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ ಸಂಸ್ಥೆಗಳು ವರದಿ ನೀಡಿದ್ದವು.