ನವದೆಹಲಿ : ವಿದೇಶದಲ್ಲಿರುವ ಕಪ್ಪುಹಣದ ಪ್ರತಿ ಪೈಸೆಯನ್ನೂ ಭಾರತಕ್ಕೆ ವಾಪಸ್ ತರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನ.2ರಂದು ರೆಡಿಯೋ ಕಾರ್ಯಕ್ರಮ ಮನ್ ಕಿ ಬಾತ್ ನಲ್ಲಿ ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ಕಪ್ಪುಹಣ ವಾಪಸ್ ತರುವುದು ಕೇಂದ್ರ ಸರ್ಕಾರದ ಆದ್ಯತೆಯಾಗಿದೆ. ಈ ವಿಷಯದಲ್ಲಿ ನಿಮ್ಮ ಪ್ರಧಾನ ಸೇವಕನನ್ನು ನಂಬಿ ಎಂದು ಜನರಿಗೆ ತಿಳಿಸಿದ್ದಾರೆ.
ವಿದೇಶಿ ಬ್ಯಾಂಕ್ ಗಳಲ್ಲಿರುವ ಕಪ್ಪುಹಣದ ಮೊತ್ತ ಎಷ್ಟಿರಬಹುದೆಂದು ನಿಖರವಾಗಿ ಈವರೆಗೂ ಯಾವುದೇ ಸರ್ಕಾರಕ್ಕಾಗಲಿ ತಮಗಾಗಲಿ ತಿಳಿದಿಲ್ಲ. ಆದರೆ ಇರುವಷ್ಟೂ ಹಣವನ್ನು ಭಾರತಕ್ಕೆ ತಂದು ದೇಶದ ಬಡಜನತೆಯ ಕಲ್ಯಾಣಕ್ಕಾಗಿ ವಿನಿಯೋಗಿಸುವುದಾಗಿ ಪ್ರಧಾನಿ ಭರವಸೆ ನೀಡಿದ್ದಾರೆ. ಕಾಳಧನ ತರುವುದಕ್ಕಾಗಿ ಬೇರೆ ಬೇರೆ ವಿಧಾನಗಳ ಬಗ್ಗೆ ಚರ್ಚೆಯಾಗಿದೆ. ಆದರೆ ದೇಶದ ಜನತೆ ಅದರಿಂದ ಗೊಂದಲಕ್ಕೀಡಾಗುವುದು ಬೇಡ, ಬಡವರ ಹಣ ವಾಪಸ್ ತರುವುದು ನಿಶ್ಚಿತ ಎಂದು ಮೋದಿ ಹೇಳಿದ್ದಾರೆ.
ಇದೇ ವೇಳೆ ಭಾರತದ ಜನತೆಯ ಮನಸ್ಥಿತಿ ಬದಲಾಗುತ್ತಿದೆ. ದೇಶದ ಜನತೆ ಸ್ವಚ್ಛತೆ(ಸ್ವಚ್ಛ ಭಾರತ) ಹಾಗೂ ದೇಶದ ಪ್ರಗತಿಯತ್ತ ಗಮನ ಹರಿಸುತ್ತಿದ್ದಾರೆ. ತಮ್ಮನ್ನು ಭೇಟಿ ಮಾಡಲು ಬರುವ ಉದ್ಯಮಿಗಳೂ ಸ್ವಾರ್ಥವನ್ನು ಬಿಟ್ಟು ಸಮಾಜದ ಅಭಿವೃದ್ಧಿಯತ್ತ ಗಮನ ಕೇಂದ್ರೀಕರಿಸುತ್ತಿದ್ದಾರೆ. ಇದು ಶುಭಸೂಚಕ ಎಂದು ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ಮೋದಿ ತಮ್ಮ ಎರಡನೇ ಭಾಷಣದಲ್ಲಿ ಸ್ವಚ್ಛ ಭಾರತ ಸೇರಿದಂತೆ ತಮ್ಮ ಇತರ ಯೋಜನೆಗಳಿಗೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿರುವ ಬೆಂಬಲದ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದು ವಿಶೇಷವಾಗಿತ್ತು.