ನವದೆಹಲಿ : ಡಿ.17ರ ಬೆಳಿಗ್ಗೆಯಿಂದ ಸ್ಪೈಸ್ ಜೆಟ್ ವಿಮಾನ ಹಾರಾಟ ಸ್ಥಗಿತಗೊಂಡಿದ್ದು ವಿಮಾನಕ್ಕಾಗಿ ಕಾದುಕುಳಿತ ಸಾವಿರಾರು ಪ್ರಯಾಣಿಕರು ಪರದಾಡುತ್ತಿದ್ದಾರೆ.
ತೀವ್ರ ಆರ್ಥಿಕ ಸಂಕಷ್ಟದಲ್ಲಿರುವ ಸ್ಪೈಸ್ ಜೆಟ್ ವಿಮಾನ ಹಾರಾಟ ಸ್ಥಗಿತಗೊಂಡಿರುವುದಕ್ಕೆ ತೈಲ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯ ಕಾರಣ ಎಂದು ತಿಳಿದುಬಂದಿದೆ. ಇದರಿಂದಾಗಿ ಸ್ಪೈಸ್ ಜೆಟ್ ಕಂಪನಿಯ ಯಾವುದೇ ವಿಮಾನಗಳು ಹಾರಾಟ ನಡೆಸದೇ ಇರುವುದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸಂಸ್ಥೆಯ ಹಿರಿಯ ಅಧಿಕಾರಿಗಳು, ಅತಿ ಶೀಘ್ರದಲ್ಲೇ ಈ ಸಮಸ್ಯೆ ಬಗೆಹರಿಯುವುದಾಗಿ ಪ್ರಯಾಣಿಕರಿಗೆ ಭರವಸೆ ನೀಡಿದ್ದಾರೆ.
ಸರ್ಕಾರಿ ವಿಮಾನ ನಿಲ್ದಾಣ ಬಳಕೆಯ ಹಿನ್ನೆಲೆಯಲ್ಲಿ ಸ್ಪೈಸ್ ಜೆಟ್ ಸಂಸ್ಥೆ ಸರ್ಕಾರಕ್ಕೆ ಈಗಾಗಲೇ 173 ಕೋಟಿ ರೂಪಾಯಿ ಪಾವತಿ ಮಾಡಬೇಕಾಗಿದೆ. ಈ ಸಂಬಂಧ ಪ್ರತಿಕ್ರಿಯಿಸಿರುವ ನಾಗರಿಕ ವಿಮಾನಯಾನ ಸಚಿವರು, ಸ್ಪೈಸ್ ಜೆಟ್ ಸಂಸ್ಥೆಯ ಸುಧಾರಣೆಗೆಗಾಗಿ, ಇಂಧನ ಕಂಪನಿಗಳು 2 ವಾರಗಳ ಕಾಲ ಸಾಲದ ರೂಪದಲ್ಲಿ ಇಂಧನ ಪೂರೈಸುವಂತೆ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.
ಈ ಹಿಂದೆ ಸ್ಪೈಸ್ ಜೆಟ್ನ ಹಿರಿಯ ಅಧಿಕಾರಿ ಸಂಜೀವ್ ಕಪೂರ್, ಕೇಂದ್ರ ವಿಮಾನಯಾನ ಸಚಿವರನ್ನು ಭೇಟಿಯಾಗಿ ಸರ್ಕಾರ ಮಧ್ಯಪ್ರವೇಶಿಸಿ, ಸಂಸ್ಥೆಯ ಆರ್ಥಿಕ ಸುಧಾರಣೆಗೆ ಸಹಾಯ ಮಾಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ವಿಮಾನಯಾನ ಸಚಿವಾಲಯ ಮಧ್ಯಪ್ರವೇಶಿಸಿದೆ.