ನವದೆಹಲಿ : ಭಾರತಕ್ಕೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನದ ಐ.ಎಸ್.ಐ ಜಮ್ಮು-ಕಾಶ್ಮೀರದಲ್ಲಿ ಆತ್ಮಹತ್ಯಾ ಬಾಂಬರ್ ಗಳ ಮೂಲಕ ದಾಳಿ ನಡೆಸಲು ಯೋಜನೆ ರೂಪಿಸಿದೆ.
ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್.ಐ, ಲಷ್ಕರ್-ಎ-ತೋಯ್ಬಾ ಉಗ್ರ ಸಂಘಟನೆ ನೆರವು ಪಡೆದು ಜಮ್ಮು-ಕಾಶ್ಮೀರದಲ್ಲಿ ಆತ್ಮಹತ್ಯಾ ದಾಳಿ ನಡೆಸಲು ಸಂಚು ರೂಪಿಸಿದೆ ಎಂಬ ಆತಂಕಕಾರಿ ಮಾಹಿತಿ ಬಯಲಾಗಿದೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮೂಲಕ 60ಕ್ಕೂ ಹೆಚ್ಚು ಲಷ್ಕರ್ ಉಗ್ರರು ಭಾರತಕ್ಕೆ ನುಗ್ಗಿ ದಾಳಿ ನಡೆಸಲು ಉದ್ದೇಶಿಸಿದ್ದಾರೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.
ಗಡಿ ಪ್ರದೇಶದಲ್ಲಿ ಅತ್ಯಂತ ಎಚ್ಚರ ವಹಿಸಲು ಗಡಿ ಭದ್ರತಾ ಪಡೆಗೆ ಗುಪ್ತಚರ ಇಲಾಖೆ ಸೂಚನೆ ನೀಡಿದೆ. ಪಾಕಿಸ್ತಾನದ ಚೆನಾಬ್ ಪ್ರಾಂತ್ಯದಲ್ಲಿರುವ ಅಲ್ಲಿನ ರೇಂಜರ್ ಗಳು ಉಗ್ರರಿಗೆ ಭಾರತದ ಗಡಿ ಪ್ರವೇಶಿಸಲು ಸಹಾಯ ಮಾಡುತ್ತಿದ್ದಾರೆ. ಅಲ್ಲದೇ ಭಾರತದೊಳಗೆ ನುಗ್ಗಲು ಅನುಕೂಲವಾಗುವ ರೀತಿಯಲ್ಲಿ ಉಗ್ರರಿಗೆ ಪಾಕಿಸ್ತಾನ ಅತ್ಯಾಧುನಿಕ ಉಪಕರಣಗಳನ್ನು ಸರಬರಾಜು ಮಾಡುತ್ತಿದೆ ಎಂದು ಹೇಳಲಾಗಿದೆ.
ಜ.26ರಂದು ನಡೆಯಲಿರುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅತಿಥಿಯಾಗಿ ಆಗಾಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ದೇಶದ ವಿವಿಧ ಭಾಗಗಳಲ್ಲಿ ಉಗ್ರರು ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದು ಇದಕ್ಕೆ ಪಾಕಿಸ್ತಾನದ ಐ.ಎಸ್.ಐ ಸಹಕಾರ ಇರುವುದು ಸ್ಪಷ್ಟವಾಗಿದೆ.