ಬೆಂಗಳೂರು : ರಾಜ್ಯದಲ್ಲಿ ವಸತಿ ಗೃಹಗಳು, ವಾಣಿಜ್ಯ ಕೇಂದ್ರಗಳು, ಶಿಕ್ಷಣ ಸಂಸ್ಥೆಗಳು ಮತ್ತು ಕೈಗಾರಿಕೆಗಳಲ್ಲಿನ ಛಾವಣಿ ಮೇಲೆ ಸೌರ ವಿದ್ಯುತ್ ಉತ್ಪಾದನಾ ಫಲಕಗಳನ್ನು ಸ್ಥಾಪಿಸಿ ಅದರ ಮೂಲಕ ವಿದ್ಯುತ್ನ್ನು ಉತ್ಪಾದಿಸುವ ಯೋಜನೆಯನ್ನು 2014 ರ ನವೆಂಬರ್ 7 ರಿಂದ ರಾಜ್ಯದ ಎಲ್ಲಾ ವಿದ್ಯುತ್ ಸರಬರಾಜು ಕಂಪೆನಿಗಳಲ್ಲಿ ಜಾರಿಗೊಳಿಸಲಾಗಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಬೀದರ್ ಶಾಸಕ ಡಾ.ಗುರುಪಾದಪ್ಪ ನಾಗಮಾರಪಲ್ಲಿ ಅವರ ಪರವಾಗಿ ಶಾಸಕ ಪಾಟೀಲ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸೌರಶಕ್ತಿ ಮೇಲ್ಫಾವಣಿ ಘಟಕಗಳನ್ನು ಸ್ಥಾಪಿಸಲು ಅರ್ಜಿದಾರರು ಆಯಾಯ ವಿದ್ಯುತ್ ಸರಬರಾಜು ಕಂಪನಿಗಳ ವ್ಯಾಪ್ತಿಯಲ್ಲಿ ಗೃಹ/ವಾಣಿಜ್ಯ/ಶಿಕ್ಷಣ/ಕೈಗಾರಿಕಾ ಸ್ಥಾವರಗಳ ಗ್ರಾಹಕರಾಗಿದ್ದು, ಆ ಸ್ಥಾವರದ ಕಟ್ಟಡದ ಮೇಲೆ ಲಭ್ಯವಿರುವ ಮೇಲ್ಫಾವಣಿ ವಿಸ್ತೀರ್ಣಕ್ಕನುಗುಣವಾಗಿ ಸೌರಶಕ್ತಿ ಮೇಲ್ಫಾವಣಿ ಘಟಕಗಳನ್ನು ಅಳವಡಿಸಬಹುದಾಗಿರುತ್ತದೆ ಎಂದರು.
ಸೌರಶಕ್ತಿ ಮೇಲ್ಪಾವಣಿ ಘಟಕಗಳಲ್ಲಿ ಸೌರಶಕ್ತಿ ಫಲಕಗಳಿಂದ ಉತ್ಪಾದಿಸಲಾದ ಡಿ.ಸಿ. ವಿದ್ಯುತ್ತನ್ನು ಇನ್ವರ್ಟರ್ಗಳ ಸಹಾಯದಿಂದ ಎ.ಸಿ.ವಿದ್ಯುತ್ ಅನ್ನಾಗಿ ಪರಿವರ್ತಿಸಲಾಗುವುದು ಎಂದು ತಿಳಿಸಿದರು.
ಸೌರಶಕ್ತಿ ಮೇಲ್ಪಾವಣೆ ಘಟಕಗಳಿಂದ ಉತ್ಪಾದಿಸಲಾದ ವಿದ್ಯುತ್ತ್ನ್ನು ಆ ಕಟ್ಟಡದಲ್ಲಿಯೇ ಸ್ವಯಂ ಬಳಕೆ ಮಾಡಿಕೊಳ್ಳುತ್ತವೆ. ಉತ್ಪಾದಿತ ವಿದ್ಯುತ್ ಪ್ರಮಾಣವು ಕಟ್ಟಡದ ಬಳಕೆಯ ಅಗತ್ಯತೆಗಿಂತ ಹೆಚ್ಚಾಗಿದ್ದಲ್ಲಿ, ಅಂತಹ ಹೆಚ್ಚುವರಿ ಉತ್ಪಾದಿತ ವಿದ್ಯುತ್ತನ್ನು, ವಿದ್ಯುತ್ ಸರಬರಾಜು ಕಂಪನಿಗಳ ವಿದ್ಯುತ್ ಜಾಲಕ್ಕೆ ರವಾನೆಯಾಗುತ್ತದೆ. ನಿವ್ವಳ ಮಾಪನ ಆಧಾರದ ಮೇಲೆ ಗ್ರಾಹಕರಿಗೆ ಹಣವನ್ನು ಪಾವತಿಸಲಾಗುತ್ತದೆ ಎಂದು ವಿವರಿಸಿದರು.