ಅಹಮದಾಬಾದ್ : ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್ವಾಡ್, ಅವರ ಪತಿ ಜಾವೇದ್ ಆನಂದ್ ಹಾಗು ಇತರರು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ಗುಜರಾತ್ ಹೈಕೋರ್ಟ್ ನಲ್ಲಿ ವಜಾಗೊಂಡಿದೆ.
ಗುಲ್ಬರ್ಗ್ ಸೊಸೈಟಿ ನಿಧಿ ದುರುಪಯೋಗ ಪ್ರಕರಣದಲ್ಲಿ ಆರೋಪಿಯಾಗಿರುವ ತೀಸ್ತಾ ಸೆಟಲ್ವಾಡ್, ಸೇರಿದಂತೆ ಇನ್ನೂ ಹಲವರು ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವುದರಿಂದ ನಿರೀಕ್ಷಣಾ ಜಾಮೀನು ನೀಡಬೇಕೆಂದು ಗುಜರಾತ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ನ್ಯಾ.ಜೆ.ಬಿ ಪರ್ದಿವಾಲ ನಿರೀಕ್ಷಣಾ ಜಾಮೀನು ಕುರಿತ ತೀರ್ಪನ್ನು ಜ.30ರಂದು ಕಾಯ್ದಿರಿಸಿದ್ದರು.
ತೀಸ್ತಾ ಸೆಟಲ್ವಾಡ್, ಗುಜರಾತ್ ನ ಗುಲ್ಬರ್ಗ್ ಸೊಸೈಟಿಯ 1.51 ಕೋಟಿ ರೂಪಾಯಿ ನಿಧಿಯನ್ನು ದುರುಪಯೋಗ ಮಾಡಿಕೊಂಡಿರುವ ಆರೋಪ ಎದುರಿಸುತ್ತಿದ್ದಾರೆ. ಸೆಟಲ್ವಾಡ್ ಜೊತೆಗೆ ಅವರ ಪತಿ ಜಾವೇದ್ ಆನಂದ್, ಗುಜರಾತ್ ಗಲಭೆಯಲ್ಲಿ ಮೃತಪಟ್ಟ ಕಾಂಗ್ರೆಸ್ ಸಂಸದ ಎಸಾನ್ ಜಾಫ್ರಿ ಅವರ ಪುತ್ರ ತನ್ವೀರ್, ಗುಲ್ಬರ್ಗ್ ಸೊಸೈಟಿ ಕಾರ್ಯದರ್ಶಿ ಫಿರೋಜ್ ಗುಲ್ಜಾರ್, ಅಧ್ಯಕ್ಷ ಸಲೀಂ ಸಂಧಿ ಕೂಡ ನಿಧಿ ದುರುಪಯೋಗ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದಾರೆ.
ಗುಲ್ಬರ್ಗ್ ಸೊಸೈಟಿಯನ್ನು ಗುಜರಾತ್ ಗಲಭೆಯ ಸಂತ್ರಸ್ತರಿಗಾಗಿಯೇ ಸ್ಥಾಪಿಸಲಾಗಿತ್ತು, ಗಲಭೆ ಸಂತ್ರಸ್ತರಿಗೆ ಸೇರಬೇಕಿದ್ದ ಹಣವನ್ನು ತೀಸ್ತಾ ಸೆಟಲ್ವಾಡ್ ಕಬಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಆರೋಪ ರಾಜಕೀಯ ಪ್ರೇರಿತವಾದದ್ದು ಎಂದು ಕೋರ್ಟ್ ನಲ್ಲಿ ತೀಸ್ತಾ ಪರ ವಕೀಲರು ವಾದ ಮಂಡಿಸಿದ್ದರು.