ಲಖ್ನೌ : ಸಮಾಜವಾದಿ ಪಕ್ಷದ ಮುಖಂಡ, ಉತ್ತರ ಪ್ರದೇಶ ಸಚಿವ ಆಜಂ ಖಾನ್ ವಿರುದ್ಧ ಇಸ್ಲಾಮಿಕ್ ಸಂಘಟನೆ ಫತ್ವಾ ಹೊರಡಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅವರ ಅಭಿಮಾನಿಗಳು ದೇವಾಲಯ ನಿರ್ಮಿಸಿದಂತೆಯೆ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಗೂ ದೇವಾಲಯ ನಿರ್ಮಿಸಬೇಕೆಂದು ಆಜಂ ಖಾನ್ ಇತ್ತೀಚೆಗಷ್ಟೇ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಸ್ಲಾಮಿಕ್ ಸಂಘಟನೆ ಆಜಂ ಖಾನ್ ವಿರುದ್ಧ ಫತ್ವಾ ಹೊರಡಿಸಿದೆ.
ಮುಸ್ಲಿಮರು ದೇವಾಲಯ ನಿರ್ಮಾಣ ಮಾಡುವ ಹಾಗಿಲ್ಲ. ದೇವಾಲಯಗಳನ್ನು ನಂಬುವುದು ಇಸ್ಲಾಮ್ ವಿರೋಧಿ ಆದ್ದರಿಂದ ಷರಿಯತ್ ಕಾನೂನಿನ ಪ್ರಕಾರ ಆಜಂ ಖಾನ್ ತಪ್ಪು ಹೇಳಿಕೆ ನೀಡಿದ್ದಾರೆ ಎಂದು ಮದರಸ ಮಂಜರ್-ಎ- ಇಸ್ಲಾಮ್ ಹೇಳಿಕೆ ನೀಡಿದೆ.
ಇಸ್ಲಾಮ್ ಕಾನೂನಿನ ಪ್ರಕಾರ ದೇವಾಲಯಗಳನ್ನು ಕಟ್ಟುವುದು ಅಪರಾಧ ಮತ್ತು ಅಂಥವರನ್ನು ಶಿಕ್ಷಿಸಲಾಗುತ್ತದೆ. ಅಲ್ಲದೇ ಆಜಂ ಖಾನ್ ದೇವಾಲಯದ ಬಗ್ಗೆ ಪ್ರಸ್ತಾಪಿಸಿರುವುದರಿಂದ ಅವರ ಪತ್ನಿ ತಮ್ಮ ಪತಿಯ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿ ಮತ್ತೊಮ್ಮೆ ಮದುವೆಯಾಗಬೇಕು ಎಂದು ಫತ್ವಾದಲ್ಲಿ ಹೇಳಿದೆ.
ಗುಜರಾತ್ ನಲ್ಲಿ ಮೋದಿಗಾಗಿ ದೇವಾಲಯ ನಿರ್ಮಿಸಿದ್ದ ಘಟನೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು. ಇದೇ ವೇಳೆ ಹೇಳಿಕೆ ನೀಡಿದ್ದ ಆಜಂ ಖಾನ್ ಮುಲಾಯಂ ಸಿಂಗ್ ಯಾದವ್ ಅವರಿಗೂ ಒಂದು ದೇವಾಲಯ ನಿರ್ಮಿಸಬೇಕೆಂದು ಅಭಿಪ್ರಾಯಪಟ್ಟಿದ್ದರು.