ನವದೆಹಲಿ : ಬಾಲಾಪರಾಧ ನ್ಯಾಯಿಕ ಕಾಯ್ದೆಯನ್ನು ತಿದ್ದುಪಡಿ ಮಾಡುವ ಮಹತ್ವದ ನಿರ್ಣಯವನ್ನು ಕೇಂದ್ರ ಸಚಿವ ಸಂಪುಟ ಕೈಗೊಂಡಿದೆ. 16ರಿಂದ 18 ವರ್ಷದವರೆಗಿನ ಬಾಲಕರು ಹೀನ ಕ್ರೌರ್ಯಗಳನ್ನು ಎಸಗಿದರೆ ಅಂಥವರನ್ನು ವಯಸ್ಕ ದೋಷಿಗಳ ರೀತಿಯೇ ಪರಿಗಣಿಸಲು ನಿರ್ಧರಿಸಿದೆ.
ಸಂಸತ್ತಿನ ಇದೇ ಅಧಿವೇಶನದಲ್ಲಿ ಈ ಕುರಿತ ತಿದ್ದುಪಡಿ ಮಸೂದೆ ಮಂಡನೆಯಾಗುವ ಸಾಧ್ಯತೆ ಇದೆ.
ದೆಹಲಿಯಲ್ಲಿ ಸಂಭವಿಸಿದ ಪ್ಯಾರಾ ಮೆಡಿಕಲ್ ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಳಿಕ ಬಾಲಾಪರಾಧ ಕಾಯ್ದೆಗೆ ತಿದ್ದುಪಡಿ ತರಬೇಕು ಎಂಬ ಕೂಗು ಎದ್ದಿತ್ತು. ಏಕೆಂದರೆ ಪ್ರಕರಣದಲ್ಲಿ ಭಾಗಿಯಾದವರಲ್ಲಿ ಇನ್ನೂ 18 ವರ್ಷ ತುಂಬದ ಬಾಲಾರೋಪಿಯೊಬ್ಬನಿದ್ದ. ಆತನಿಗೆ 17 ಚಿಲ್ಲರೆ ವಯಸ್ಸಾಗಿತ್ತು. ಹೀಗಾಗಿ ಈತ ಕೂದಲೆಳೆ ಅಂತರದಲ್ಲಿ ಗಲ್ಲು ಶಿಕ್ಷೆಯಿಂದ ಬಚಾವಾಗಿದ್ದ. ಇನ್ನೂ 18 ತುಂಬದ ಕಾರಣ ಬಾಲಾಪರಾಧ ಕಾಯ್ದೆಯನ್ವಯ, ಕೇವಲ 3 ವರ್ಷ ಶಿಕ್ಷೆ ಪಡೆದು ಪಾರಾಗಿದ್ದ.
ಹೀಗಾಗಿ 16 ತುಂಬಿದ ಬಾಲಕರಿದ್ದರೆ, ಅತ್ಯಾಚಾರ-ಕೊಲೆಯಂಥ ಹೀನ ಕೃತ್ಯ ಎಸಗಿದ್ದರೆ, ಅಂಥವರನ್ನು ವಯಸ್ಕ ಆರೋಪಿ ಅಥವಾ ದೋಷಿ ಎಂದೇ ಪರಿಗಣಿಸಬೇಕು ಎಂಬ ಕೂಗು ಎದ್ದಿತ್ತಾದರೂ, ಯುಪಿಎ ಸರ್ಕಾರದ ಅವಧಿಯಲ್ಲಿ ರಚನೆಯಾಗಿದ್ದ ನ್ಯಾ| ಜೆ.ಎಸ್.ವರ್ಮಾ ಸಮಿತಿ ಈ ಬೇಡಿಕೆ ತಿರಸ್ಕರಿಸಿತ್ತು. ಬಾಲಾಪರಾಧಿಗಳ ವಯಸ್ಸಿನ ಮಿತಿ 18 ಇದ್ದಿದ್ದು ಸರಿ ಎಂದಿತ್ತು.
ಆದರೆ ಈಗ ಎನ್.ಡಿ.ಎ ಸರ್ಕಾರ ಬಂದ ನಂತರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮನೇಕಾ ಗಾಂಧಿ, ಬಾಲಾಪರಾಧಿಗಳ ವಯಸ್ಸನ್ನು ಗಂಭೀರ ಅಪರಾಧ ಪ್ರಕರಣಗಳಲ್ಲಿ 16ಕ್ಕಿಳಿಸಬೇಕು ಎಂದು ಪಟ್ಟು ಹಿಡಿದಿದ್ದರು.