ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ 100 ಸ್ಮಾರ್ಟ್ ಸಿಟಿ ಗಳ ನಿರ್ಮಾಣಕ್ಕೆ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಆದರೆ ಇನ್ನೂ ಎಲ್ಲೆಲ್ಲಿ ಸ್ಮಾರ್ಟ್ ಸಿಟಿ ನಿರ್ಮಿಸಬೇಕು ಎಂಬುದು ತೀರ್ಮಾನವಾಗಿಲ್ಲ. ಸ್ಮಾರ್ಟ್ ಸಿಟಿಗಳ ಆಯ್ಕೆಗೆ ಇನ್ನೂ ಒಂದು ತಿಂಗಳು ಸಮಯ ಬೇಕಾಗುತ್ತದೆ ಎಂದು ನಗರಾಭಿವೃದ್ಧಿ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.
ಇದೇ ವೇಳೆ ಯುಪಿಎ ಸರ್ಕಾರದ ಜವಾಹರಲಾಲ್ ನೆಹರು ನಗರ ನವೀಕರಣ ಮಿಷನ್ (ಜೆ-ನರ್ಮ್) ಅನ್ನು ಹೊಸ ರೂಪದಲ್ಲಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿನೊಂದಿಗೆ ಜಾರಿಗೆ ತರಲೂ ಕೇಂದ್ರ ತೀರ್ಮಾನಿಸಿದೆ.
ರಾಜ್ಯ ಸರ್ಕಾರಗಳು ತಮ್ಮ ವ್ಯಾಪ್ತಿಯ ಹಲವಾರು ನಗರಗಳನ್ನು ಸ್ಮಾರ್ಟ್ ಸಿಟಿ ಯೋಜನೆಗೆ ಶಿಫಾರಸು ಮಾಡಿವೆಯಾದರೂ ಸ್ಪರ್ಧೆಯೊಂದನ್ನು ಏರ್ಪಡಿಸುವ ಮೂಲಕ ನಗರಗಳನ್ನು ಸ್ಮಾರ್ಟ್ ಸಿಟಿಗೆ ಆಯ್ಕೆ ಮಾಡಲಾಗುತ್ತದೆ. ಸ್ಮಾರ್ಟ್ ಸಿಟಿಯಾಗಿ ಅಭಿವೃದ್ಧಿ ಹೊಂದಲು ಬಯಸಿರುವ ನಗರಗಳ ನಡುವೆ ’ಸಿಟಿ ಚಾಲೆಂಜ್ ಕಾಂಪಿಟಿಷನ್' ಏರ್ಪಡಿಸಲಾಗುತ್ತದೆ. ಯೋಜನೆಯ ಉದ್ದೇಶವನ್ನು ಹೇಗೆ ನಗರ ಗಳು ಸಾಕಾರಗೊಳಿಸಲಿವೆ ಎಂಬುದನ್ನು ಅಳೆಯಲಾಗುತ್ತದೆ.
ಇದಕ್ಕೆ "ಅಟಲ್ ಮಿಷನ್ ಫಾರ್ ರೆಜ್ಯುವೆನೇಷನ್ ಆ್ಯಂಡ್ ಅರ್ಬನ್ ಟ್ರಾನ್ಸ್ಫಾರ್ಮೇಶನ್ (ಅಟಲ್ ನಗರ ಪರಿವರ್ತನೆ ಹಾಗೂ ಪುನರುಜ್ಜೀವನ ಯೋಜನೆ- ಅಮೃತ್) ಎಂದು ನಾಮಕರಣ ಮಾಡಲಾಗಿದೆ. ಈ ಯೋಜನೆಯಡಿ 500 ನಗರಗಳ ಪುನರುಜ್ಜೀವನಕ್ಕೆ ಕ್ರಮ ಕೈಗೊಳ್ಳಲಾಗುವುದು.
100 ಸ್ಮಾರ್ಟ್ ಸಿಟಿ ನಿರ್ಮಾಣಕ್ಕೆ 48 ಸಾವಿರ ಕೋಟಿ ರೂ. ಹಾಗೂ ಅಮೃತ್ ಯೋಜನೆಗೆ 50 ಸಾವಿರ ಕೋಟಿ ರೂ. ವ್ಯಯಿಸಲು ಸರ್ಕಾರ ತೀರ್ಮಾನಿಸಿದೆ ಎಂದು ನಗರಾಭಿವೃದ್ಧಿ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ನಗರ ಪ್ರದೇಶಗಳ ಚಿತ್ರಣವನ್ನು ಬದಲಿಸಿ, ನಗರಗಳನ್ನು ವಾಸಯೋಗ್ಯ ತಾಣವನ್ನಾಗಿಸುವುದು, ಆರ್ಥಿಕ ಪ್ರಗತಿಯ ಚಾಲಕಶಕ್ತಿಯನ್ನಾಗಿಸುವ ಉದ್ದೇಶದಿಂದ 100 ಸ್ಮಾರ್ಟ್ ಸಿಟಿಗಳ ನಿರ್ಮಾಣ ಯೋಜನೆಯನ್ನು ಸರ್ಕಾರ ಕೈಗೆತ್ತಿಕೊಳ್ಳಲು ಉದ್ದೇಶಿಸಿದೆ. ಈ ಯೋಜನೆಯಡಿ ಆಯ್ಕೆಯಾಗುವ ಪ್ರತಿ ನಗರಕ್ಕೂ ಐದು ವರ್ಷಗಳ ಕಾಲ ಪ್ರತಿ ವರ್ಷ 100 ಕೋಟಿ ರೂ. ಅನುದಾನ ಲಭಿಸಲಿದೆ.
ಅಟಲ್ ಹೆಸರಿನಲ್ಲಿ ಜೆ-ನರ್ಮ್ ಹೊಸ ಆವೃತ್ತಿ ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ. ಅಮೃತ್ ಎಂಬ ಹೆಸರಿನ ಈ ಯೋಜನೆಯಡಿ ಜೆ-ನರ್ಮ್ನಡಿ ಮಂಜೂರಾಗಿ, ಪೂರ್ಣಗೊಳ್ಳದೇ ಇರುವ ಯೋಜನೆಗಳಿಗೂ ಕೇಂದ್ರೀಯ ಅನುದಾನ ನೀಡಲಾಗುತ್ತದೆ.
ಕೇಂದ್ರ ಸರ್ಕಾರದ ಈ ಎರಡೂ ನಿರ್ಧಾರಗಳಿಂದ ದೇಶದ ನಗರ ಪ್ರದೇಶಗಳಲ್ಲಿ ಮುಂದಿನ ಐದು ವರ್ಷಗಳಲ್ಲಿ ಕನಿಷ್ಠ 2 ಲಕ್ಷ ಕೋಟಿ ರೂ. ಹೂಡಿಕೆಯಾಗಲಿದೆ. ರಾಜ್ಯ ಸರ್ಕಾರಗಳು ನಗರ ಸ್ಥಳೀಯ ಸಂಸ್ಥೆಗಳು ಶೇ.50ರಿಂದ ಶೇ.66ರವರೆಗೂ ಸಂಪನ್ಮೂಲ ಕ್ರೋಢೀಕರಿಸಬೇಕಾಗುತ್ತದೆ.