ರಾಯ್ ಪುರ : ಪ್ರಧಾನಿ ನರೇಂದ್ರ ಮೋದಿ ಅವರ ದಂತೇವಾಡಾ ಭೇಟಿಯನ್ನು ಖಂಡಿಸಿ ಛತ್ತೀಸ್ ಗಢದ ಬಸ್ತರ್ ವಲಯದ ನಕ್ಸಲ್ ಗುಂಪುಗಳು ವಿರೋಧಿಸಿದ್ದು, ಈ ಭೇಟಿ ಬಹಿಷ್ಕರಿಸುವಂತೆ ಜನತೆಗೆ ಕರೆ ನೀಡಿವೆ.
ದಂತೇವಾಡದಲ್ಲಿ ಪ್ರಧಾನಿ ಮೋದಿ, ಅಲ್ಟ್ರಾ ಮೆಗಾ ಉಕ್ಕು ಘಟಕ ಮತ್ತು ರಾವ್ ಘಾಟ್-ಜಗದಲ್ ಪುರ ರೈಲ್ವೆ ಮಾರ್ಗದ ಎರಡನೇ ಹಂತವನ್ನೂ ಉದ್ಘಾಟಿಸಲಿದ್ದಾರೆ. ಅಲ್ಲದೇ ಈ ಭಾಗದಲ್ಲಿ ಕೈಗೊಳ್ಳಲಾಗಿರುವ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಮತ್ತು ಪರಿಶೀಲನೆ ನಡೆಸಲಿದ್ದಾರೆ. ಆದರೆ ಮೋದಿ ಭೇಟಿ ಖಂಡಿಸಿ ನಕ್ಸಲರು ಮೇ 8 ಮತ್ತು 9ರಂದು ’ದಂಡಕಾರಣ್ಯ ಬಂದ್' ಆಚರಿಸುತ್ತಿವೆ.
ನಕ್ಸಲ್ ಪೀಡಿತ ಕಾಂಕೇರ್ ಜಿಲ್ಲೆಯ ಭಾನುಪ್ರತಾಪ್ ಪುರ-ಪಾಕಾಹಂಜೋರೆ ಮುಖ್ಯ ರಸ್ತೆಯನ್ನು ಮರಗಿಡಗಳ ಟೊಂಗೆಗಳನ್ನು ಅಡ್ಡವಾಗಿರಿಸಿ ಬಂದ್ ಮಾಡಿರುವ ನಕ್ಸಲೀಯರು, ಭದ್ರತಾ ಪಡೆಗಳನ್ನು ಆತಂಕಕ್ಕೀಡು ಮಾಡಿದ್ದಾರೆ. ಕೂಡಲೇ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿದ್ದು, ರಸ್ತೆ ತೆರವುಗೊಳಿಸಲು ಶ್ರಮಿಸಿವೆ.
ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಕೇಂದ್ರೀಯ ಪಡೆಗಳು ಸೇರಿದಂತೆ 10 ಸಾವಿರ ಭದ್ರತಾ ಸಿಬ್ಬಂದಿಗಳನ್ನು ದಂತೇವಾಡಾ ಜಿಲ್ಲೆಯಲ್ಲಿ ನಿಯೋಜಿಸಲಾಗಿದೆ. ಬಾಂಬ್ ನಿಷ್ಕ್ರಿಯ ದಳಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಅಲ್ಲದೆ, ಮುಂಜಾಗ್ರತಾ ಕ್ರಮವಾಗಿ ಎಲ್ಲ ಆದಿವಾಸಿ ಮಾರುಕಟ್ಟೆಗಳನ್ನು ಬಂದ್ ಮಾಡಿಸಲಾಗಿದೆ.