ನವದೆಹಲಿ : ಸೋಮವಾರ ರಾಜ್ಯಸಭೆಯಲ್ಲಿ ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ವಿವಾದದ ಕುರಿತಂತೆ ಮೌನ ಮುರಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಲಲಿತ್ ಮೋದಿ ಅವರಿಗೆ ಪ್ರವಾಸಿ ದಾಖಲೆಗಳನ್ನು ನೀಡುವಂತೆ ಬ್ರಿಟಿಷ್ ಸರ್ಕಾರಕ್ಕೆ ಎಂದೂ ಮನವಿಯನ್ನೇ ಮಾಡಿಲ್ಲ, ನನ್ನ ಮೇಲೆ ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದು ಹೇಳಿದರು.
ರಾಜ್ಯಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆಯೇ ಲಲಿತ್ ಮೋದಿ ಹಾಗೂ ವ್ಯಾಪಂ ಹಗರಣ ಪ್ರತಿಧ್ವನಿಸಿತು. ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳ ತೀವ್ರ ಗದ್ದಲದ ನಡುವೆಯೂ ಸುಷ್ಮಾ ಸ್ವರಾಜ್ ಹೇಳಿಕೆ ನೀಡಿದರು. ಆದರೆ ವಿಪಕ್ಷಗಳು ತೀವ್ರ ಕೋಲಾಹಲ ನಡೆಸಿದ ಪರಿಣಾಮ ಸಭಾಪತಿ ಕಲಾಪವನ್ನು ಮಧ್ಯಾಹ್ನದವರೆಗೆ ಮುಂದೂಡಿದ್ದರಿಂದ ಸುಷ್ಮಾ ತಮ್ಮ ಮಾತು ಮುಂದುವರಿಸಲಾಗಲಿಲ್ಲ.
ಆದರೆ ಸಂಸತ್ತಿನ ಸಮ್ಮತಿ ಕೇಳದೆ ಸುಷ್ಮಾ ಸ್ವರಾಜ್ ಅವರು ಹೇಳಿಕೆ ನೀಡಿದ್ದರಿಂದ, ಇದನ್ನು ಕಾಂಗ್ರೆಸ್ 'ಅಕ್ರಮ' ಎಂದು ಹೇಳಿದೆ. ಸಂಸತ್ತಿನ ಕಲಾಪ ಸುಗಮವಾಗಿ ನಡೆಯಬೇಕಾದರೆ, ಸುಷ್ಮಾ ಸ್ವರಾಜ್ ಸೇರಿ ವಿವಾದದಲ್ಲಿ ಸಿಲುಕಿರುವ ರಾಜಸ್ತಾನ ಮುಖ್ಯಮಂತ್ರಿ ವಸುಂಧರಾ ರಾಜೆ ಮತ್ತು ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾಣ್ ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಹೇಳಿದೆ.
ಇದಕ್ಕೆ ಬಿಜೆಪಿ, ರಾಜೀನಾಮೆ ಪಡೆಯುವ ಆಯ್ಕೆಯನ್ನು ತಳ್ಳಿಹಾಕಿದೆ. ಆದರೆ ಕಲಾಪ ಸುಗಮಗೊಳಿಸಲು, ಮೊದಲು ಚರ್ಚೆ ಪ್ರಾರಂಭವಾದರೆ, ಪ್ರಧಾನಿ ನರೇಂದ್ರ ಮೋದಿಯವರು ವಿವಾದದ ಬಗ್ಗೆ ಮಾತನಾಡುತ್ತಾರೆ ಎಂದಿದೆ. ಆದರೆ ಬೆಳಗ್ಗೆ ಕಾಂಗ್ರೆಸ್ ಸಂಸದೀಯ ಮಂಡಳಿ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಈ ಆಯ್ಕೆಯನ್ನು ತಿರಸ್ಕರಿಸಿದ್ದಾರೆ.