ನವದೆಹಲಿ : ದೇಶಾದ್ಯಂತ 33 ಕೋಟಿ ಜನರು ಬರ, ಕುಡಿಯುವ ನೀರಿನ ಸಮಸ್ಯೆ ಮತ್ತು ಕೃಷಿ ಸಂಬಂಧ ಸಮಸ್ಯೆಗಳಿಗೆ ಸಿಲುಕಿದ್ದಾರೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ತಿಳಿಸಿದೆ.
ಕೇಂದ್ರ ಸರ್ಕಾರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿ.ಎ. ನರಸಿಂಹ ಅವರು ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿ ಎಂ.ಬಿ.ಲೋಕುರ್ ಅವರಿದ್ದ ಪೀಠಕ್ಕೆ ಈ ವರದಿಯನ್ನು ಸಲ್ಲಿಸಿದ್ದಾರೆ.
ಕೇಂದ್ರ ಸರ್ಕಾರ ತಯಾರು ಮಾಡಿರುವ ಅಂಕಿ-ಅಂಶಗಳ ಪ್ರಕಾರ, ದೇಶದೆಲ್ಲೆಡೆ ಸಂಭವಿಸಿರುವ ಭೀಕರ ಬರಗಾಲದಿಂದಾಗಿ 33 ಕೋಟಿ ಜನರ ಸಂಕಷ್ಟದಲ್ಲಿ ಜೀವನ ನಡೆಸುವಂತಾಗಿದೆ. ಇದರಂತೆ 2,55,923 ಹಳ್ಳಿಗಳು. 254 ಜಿಲ್ಲೆಗಳು ಹಾಗೂ 10 ರಾಜ್ಯಗಳು ಬರಗಾಲಕ್ಕೆ ತುತ್ತಾಗಿವೆ ಎಂದು ಹೇಳಿಕೊಂಡಿದೆ.
ಈ ಹಿಂದೆ ಬರಗಾಲ ಪೀಡಿತಕ್ಕೊಳಗಾಗಿರುವ 12 ರಾಜ್ಯಗಳಾದ ಉತ್ತರ ಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಗುಜರಾತ್, ಒಡಿಶಾ, ಜಾರ್ಖಾಂಡ್, ಬಿಹಾರ, ಹರಿಯಾಣ ಹಾಗೂ ಛತ್ತೀಸ್ ಗಢ ರಾಜ್ಯಗಳ ಕಡೆ ಕೇಂದ್ರ ಸರ್ಕಾರ ಹೆಚ್ಚಿನ ಗಮನ ಹರಿಸಬೇಕು, ಇಲ್ಲಿನ ಜನತೆ ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆಂದು ಸುಪ್ರೀಂನಲ್ಲಿ ಅರ್ಜಿಯೊಂದನ್ನು ಸಲ್ಲಿಸಲಾಗಿತ್ತು.
ಭಾರತ ಕಳೆದ 15 ವರ್ಷಗಳಿಂದ ಬೇಸಿಗೆ ಕಾಲದಲ್ಲಿ ಭೀಕರ ಬರಗಾಲವನ್ನು ಅನುಭವಿಸುತ್ತಿದೆ. 2002ರಲ್ಲಿ 17 ರಾಜ್ಯಗಳ 383 ಜಿಲ್ಲೆಗಳು ಬರಗಾಲಕ್ಕೆ ತುತ್ತಾಗಿದ್ದವು. 2004ರಲ್ಲಿ 9 ರಾಜ್ಯಗಳ 223 ಜಿಲ್ಲೆಗಳು ಹಾಗೂ 2009ರಲ್ಲಿ 12 ರಾಜ್ಯಗಳ 388 ಜಿಲ್ಲೆಗಳ ಮೇಲೆ ಬರಗಾಲದ ಪರಿಣಾಮ ಬೀರಿತ್ತು ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.
ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿ.ಎ. ನರಸಿಂಹ ಅವರು ಕೇಂದ್ರ ಸರ್ಕಾರದ ಪರವಾಗಿ ಸುಪ್ರೀಂ ನಲ್ಲಿ ವರದಿಯನ್ನು ಸಲ್ಲಿಕೆ ಮಾಡಿದ್ದು, ತಮ್ಮ ವಾದವನ್ನು ಮಂಡಿಸಿದರು.
ಅಂಕಿ-ಅಂಶಗಳಲ್ಲಿ ಕೆಲವು ಪ್ರದೇಶಗಳನ್ನು ಬರ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿಲಾಗಿದೆ. ಆದರೆ, ಅಲ್ಲಿರುವ ಎಲ್ಲಾ ಜನರ ಮೇಲೂ ಬರ ಪರಿಣಾಮ ಬೀರಿದೆ ಎಂದು ಹೇಳಲು ಸಾಧ್ಯವಿಲ್ಲ. ಎಲ್ಲಾ ರೈತರ ಮೇಲೂ ಪರಿಣಾಮ ಬೀರಿಲ್ಲ. ಕೇಂದ್ರ ಸರ್ಕಾರ ತಯಾರು ಮಾಡಿರುವ ವರದಿಯ ಪ್ರಕಾರ, 2015-16ರ ಅವಧಿಯಲ್ಲಿ 2011-12ರ ದರದಲ್ಲೇ ಮೌಲ್ಯವರ್ಧಿತ ಸೇವೆಗಳಿಗೆ ಕೃಷಿ, ಜಾನುವಾರು, ಅರಣ್ಯ ಮತ್ತು ಮೀನುಗಾರಿಕೆ ಆದಾಯದ ಶೇ.15.35ರಷ್ಟನ್ನು ಸೇರಿಸಲಾಗಿದೆ. ಗ್ರಾಮೀಣ ಪ್ರದೇಶದ ಶೇ.58 ರಷ್ಚು ಆದಾಯ ಕೃಷಿ ಆಧಾರಿತವಾಗಿದೆ ಎಂದು ಹೇಳಿದರು.
ಜೂನ್ ಹಾಗೂ ಸೆಪ್ಟೆಂಬರ್ ತಿಂಗಳಿನಲ್ಲಿ ಶೇ.75ಕ್ಕಿಂತಲೂ ಕಡಿಮೆ ಮಳೆಯಾಗಿದ್ದರೆ ರಾಜ್ಯಗಳಿಗೆ ಎಚ್ಚರಿಕೆಯನ್ನು ನೀಡಬೇಕು. ನವೆಂಬರ್ ಹಾಗೂ ಡಿಸೆಂಬರ್ ತಿಂಗಳಿನಲ್ಲಿ ಸ್ಯಾಟಲೈಟ್ ಮೂಲಕ ಮಾಹಿತಿಯನ್ನು ಪಡೆಯಬೇಕು. ಇದರಂತೆ ಜನವರಿ ಹಾಗೂ ಫೆಬ್ರವರಿ ತಿಂಗಳಿನಲ್ಲಿ ಅಂತಿಮ ತೀರ್ಮಾನಕ್ಕೆ ಬಂದು ಬೆಳೆ ನಾಶ ಹಾಗೂ ನೀರಿನ ಸಮಸ್ಯೆಯನ್ನು ತಿಳಿದು ಆಯಾ ರಾಜ್ಯಗಳನ್ನು ಬರ ಪೀಡಿತ ರಾಜ್ಯಗಳೆಂದು ಘೋಷಣೆ ಮಾಡಬೇಕು. ನಿಮ್ಮ ಚಟುವಟಿಕೆಗಳು ಆಗಸ್ಟ್ ನಿಂದಲೇ ಆರಂಭವಾಗಬೇಕು ಎಂದು ಹೇಳಿದೆ.