ನವದೆಹಲಿ : ಕೇಂದ್ರ ಸಚಿವ ಸಂಪುಟ ಪುನಾರಚನೆಗೆ ಕ್ಷಣಗಣನೆ ಆರಂಭವಾಗಿದೆ. ಕೇಂದ್ರದಲ್ಲಿ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 2ನೇ ಬಾರಿ ನಡೆಸುತ್ತಿರುವ ಸಂಪುಟ ಸರ್ಜರಿ ಇದಾಗಿದೆ.
ಈ ಬಾರಿ 19 ಸಂಸದರು ಮೋದಿ ಸಂಪುಟಕ್ಕೆ ಸೇರ್ಪಡೆಗೊಳ್ಳಲಿದ್ದಾರೆ. ಮುಂಬರಲಿರುವ ಉತ್ತರಪ್ರದೇಶ, ಪಂಜಾಬ್ ಹಾಗೂ ಉತ್ತರಾಖಂಡ ಚುನಾವಣೆ ಹಿನ್ನೆಲೆಯಲ್ಲಿ ಈ ಮೂರು ರಾಜ್ಯಗಳಿಗೆ ಸಂಪುಟದಲ್ಲಿ ಹೆಚ್ಚಿನ ಪ್ರಾಶಸ್ತ್ಯ ಸಿಗುವುದು ಬಹುತೇಕ ಖಚಿತವಾಗಿದೆ.
ರಾಜ್ಯ ಬಿಜೆಪಿ ಘಟಕದ ಬೇಡಿಕೆ ಹಿನ್ನೆಲೆಯಲ್ಲಿ ವಿಜಯಪುರ ಸಂಸದ, ದಲಿತ ಮುಖಂಡ ರಮೇಶ್ ಜಿಗಜಿಣಗಿಗೆ ಮೋದಿ ಸಂಪುಟದಲ್ಲಿ ಮಂತ್ರಿಭಾಗ್ಯ ಲಭಿಸಿದೆ. ಸತತ 5 ಬಾರಿ ಸಂಸದರಾಗಿರುವ ಜಿಗಜಿಣಗಿ ಮೊದಲ ಬಾರಿ ಕೇಂದ್ರ ಮಂತ್ರಿಯಾಗುತ್ತಿದ್ದಾರೆ. ಕೇಂದ್ರ ಕೈಗಾರಿಕಾ ಖಾತೆ ರಾಜ್ಯ ಸಚಿವ ಜಿ.ಎಂ. ಸಿದ್ದೇಶ್ವರ ಸಂಪುಟದಿಂದ ಹೊರಬೀಳಲಿದ್ದು, ಅವರಿಗೆ ಇತರೆ ಜವಾಬ್ದಾರಿ ಹೊರಿಸಲಾಗಿದೆ.
ಸಂಭಾವ್ಯ ಸಚಿವರ ಪಟ್ಟಿ ಈ ಕೆಳಗಿನಂತಿದೆ:
ಕರ್ನಾಟಕದ ವಿಜಯಪುರ ಸಂಸದ ರಮೇಶ್ ಜಿಗಜಿಣಗಿ
ರಾಜಸ್ಥಾನದ ಬಿಕಾನೇರ ಸಂಸದ ಪಿ ಪಿ ಚೌಧರಿ
ಉತ್ತರಾಖಂಡದ ದಲಿತ ಸಂಸದ ಅಜಯ್ ತಮ್ಟಾ
ಡಾರ್ಜಿಲಿಂಗ್ ಸಂಸದ ಎಸ್. ಎಸ್.ಅಹ್ಲುವಾಲಿಯಾ
ರಾಜ್ಯಸಭಾ ಸದಸ್ಯ ವಿಜಯ್ ಗೋಯೆಲ್
ಮಹಾರಾಷ್ಟ್ರ ಆರ್ಪಿಐ ಸಂಸದ ರಾಮದಾಸ್ ಅಠಾವಳೆ
ಗುಜರಾತ್ನ ರಾಜ್ಯಸಭೆ ಸದಸ್ಯ ಪುರುಷೋತ್ತಮ
ಉತ್ತರ ಪ್ರದೇಶದ ಸಂಸದ ಮಹೇಂದ್ರ ನಾಥ್ ಪಾಂಡೆ
ಉತ್ತರ ಪ್ರದೇಶದ ದಲಿತ ಸಂಸದ ಕೃಷ್ಣ ರಾಜ್
ರಾಜ್ಯಸಭೆ ಸದಸ್ಯಅಕ್ಬರ್
ಮಧ್ಯಪ್ರದೇಶದ ಸಂಸದ ಅನಿಲ್ ಮಾಧವ್ ದವೆ
ದಿಬ್ರುಗಢ ಸಂಸದ ರಾಮೇಶ್ವರ್ ತೆಲಿ
ಅಸ್ಸಾಂನ ಸಂಸದ ರಾಮನ್ ದೇಕಾ
ಸದ್ಯ ಕೇಂದ್ರ ಸಂಪುಟದಲ್ಲಿ 64 ಸದಸ್ಯರಿದ್ದಾರೆ. ಸಂಪುಟ ಸರ್ಜರಿ ವೇಳೆ 7 ಸಚಿವರು ಸ್ಥಾನ ಕಳೆದುಕೊಂಡಲ್ಲಿ ಸದಸ್ಯರ ಸಂಖ್ಯೆ 57ಕ್ಕೆ ಕುಸಿಯಲಿದೆ. 19 ಸಂಸದರು ಹೊಸದಾಗಿ ಮಂತ್ರಿ ಮಂಡಲಕ್ಕೆ ಸೇರ್ಪಡೆಯಾದ ನಂತರ ಈ ಸಂಖ್ಯೆ 76ಕ್ಕೆ ಏರಿಕೆಯಾಗಲಿದೆ.