ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಆಕ್ಟ್ ಈಸ್ಟ್ ಪಾಲಿಸಿಯನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಗೃಹ ಸಚಿವಾಲಯ, ಮಾಯನ್ಮಾರ್ ಗಡಿಯಲ್ಲಿರುವ ಮಣಿಪುರದ ಉಖ್ರೂಲ್ ನಲ್ಲಿ ಬಾರ್ಡರ್ ಸಂಪರ್ಕ ಕಛೇರಿ ಸ್ಥಾಪಿಸಲು ಯೋಜನೆ ರೂಪಿಸಿದೆ.
ಕಳೆದ ವರ್ಷ ಸ್ಥಳೀಯ ಮಣಿಪುರಿ ಜನರು ಹಾಗೂ ಮಾಯನ್ಮಾರ್ ನ ಸೇನಾ ಸಿಬ್ಬಂದಿಯ ನಡುವೆ ಘರ್ಷಣೆ ಉಂಟಾಗಿ ಜೀವ ಹಾನಿ ಸಂಭವಿಸಿದ್ದರ ಪರಿಣಾಮ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಅ.13ರಂದು ಮಾಯನ್ಮಾರ್ ನ ಯಾಂಗೊನ್ ಗೆ ಭೇಟಿ ನೀಡಲಿರುವ ಕೇಂದ್ರ ಗೃಹ ಕಾರ್ಯದರ್ಶಿ ಅನಿಲ್ ಗೋಸ್ವಾಮಿ ಅಲ್ಲಿನ ಗೃಹ ಕಾರ್ಯದರ್ಶಿ ಹಾಗೂ ಮಾಯನ್ಮಾರ್ ನ ಸಚಿವರನ್ನು ಭೇಟಿ ಮಾಡಿ ಚರ್ಚೆ ನಡೆಸಲಿದ್ದಾರೆ. ಭೇಟಿ ವೇಳೆ ಮಾಯನ್ಮಾರ್ ಗಡಿಯಲ್ಲಿರುವ ಮಣಿಪುರದ ಉಖ್ರೂಲ್ ನಲ್ಲಿ ಬಾರ್ಡರ್ ಸಂಪರ್ಕ ಕಛೇರಿ ಸ್ಥಾಪಿಸಿವ ಯೋಜನೆಯನ್ನು ಪ್ರಸ್ತಾಪಿಸಲಿದ್ದಾರೆ.
ಕಳೆದ 2 ವರ್ಷಗಳಿಂದ ಇದೇ ಮೊದಲ ಬಾರಿಗೆ ಉಭಯ ದೇಶಗಳ ಪ್ರತಿನಿಧಿಗಳು ಮಾತುಕತೆ ನಡೆಸಲಿದ್ದಾರೆ. ಅನಿಲ್ ಗೋಸ್ವಾಮಿ ಅವರೊಂದಿಗೆ 12 ಜನರ ನಿಯೋಗ ತೆರಳಿದ್ದು, ಉಲ್ಫಾ, ಎನ್.ಎಸ್.ಸಿ.ಎನ್(ಐ.ಎಂ) ದಂಗೆಕೋರರ ಗುಂಪು ಹಾಗೂ ಅವರಿಗೆ ಬೆಂಗಾವಲಾಗಿ ನಿಂತಿರುವ ಆರ್ಥಿಕ ಮೂಲಗಳನ್ನು ನಿರ್ನಾಮ ಮಾಡುವ ಸಂಬಂಧ ಉಭಯ ದೇಶಗಳ ನಡುವೆ ಮಹತ್ವದ ಮಾತುಕತೆ ನಡೆಯಲಿದೆ.
ದಂಗೆಕೋರರ ಗುಂಪುಗಳು ಮಾಯನ್ಮಾರ್-ಭಾರತದ ಗಡಿ ಪ್ರದೇಶದಲ್ಲಿ ಶಸ್ತ್ರಾಸ್ತ್ರಗಳನ್ನು ಕಳ್ಳಸಾಗಣೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತಿದ್ದು ಕಳ್ಳಸಾಗಣೆಯಲ್ಲಿ ತೊಡಗಿರುವ ಸಮಾಜಘಾತುಕ ಶಕ್ತಿಗಳನ್ನು ನಿಗ್ರಹಿಸಲು ಸಿದ್ಧರಿದ್ದೇವೆ ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸೌಹಾರ್ದತೆಯ ಸಂಕೇತವಾಗಿ ಭಾರತ ತಾನು ಬಂಧಿಸಿರುವ 710 ಮಾಯನ್ಮಾರ್ ನ ಮೀನುಗಾರರ ಬಿಡುಗಡೆ ಮಾಡುವ ಸಾಧ್ಯತೆಯೂ ಇದೆ.